ಅಕ್ಸಿಜನ್ ದುರಂತ ಪ್ರಕರಣ: ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತನಿಖಾಧಿಕಾರಿ ಶಿವಯೋಗಿ ಕಳಸದ್ ಭೇಟಿ, ಪರಿಶೀಲನೆ… ಚಾಮರಾಜನಗರ,ಮೇ,4,2021(..):ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ಕೊರತೆಯಿಂದ 24 ಮಂದಿ ರೋಗಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆ ನಡೆಸಲು ಎಂಡಿ ಶಿವಯೋಗಿ ಕಳಸದ್ ಅವರನ್ನ ಸರ್ಕಾರ ನೇಮಿಸಿದೆ. ಈ ಹಿನ್ನೆಲೆಯಲ್ಲಿ ಎಂಡಿ ಶಿವಯೋಗಿ ಕಳಸದ್ ಇಂದಿನಿಂದಲೇ ತನಿಖೆ ಆರಂಭಿಸಿದ್ದು, ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕ್ಸಿಜನ್ ದುರಂತಕ್ಕೆ ನೈಜ ಕಾರಣವೇನು, ಎಷ್ಟು ಮಂದಿ ಸೋಂಕಿತರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ. ಈ ಅವಘಡಕ್ಕೆ ಹೊಣೆ ಯಾರು ಹೊರಬೇಕು, ಆಸ್ಪತ್ರೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ವೈಫಲ್ಯದ ಕುರಿತು ಅಧಿಕಾರಿ ಶಿವಯೋಗಿ ಕಳಸದ್ ತನಿಖೆ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಿವಯೋಗಿ ಕಳಸದ್ ಅವರು ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಮಲೋಚನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಡೀನ್ ಡಿಎಚ್ ಓ ಸೇರಿದಂತೆ ಎಲ್ಲರೂ ಹಾಜರಿದ್ದರು. ನಂತರ ಆಸ್ಪತ್ರೆಯಲ್ಲಿನ ಸ್ಥಿತಿಗತಿಗಳ ಬಗ್ಗೆ, ಆಕ್ಸಿಜನ್ ಪ್ಲಾಂಟ್ , ಆಸ್ಪತ್ರೆಯ ಕೋವಿಡ್ ಸೆಂಟರ್ ಗಳ ಬಗ್ಗೆ ಶಿವಯೋಗಿ ಕಳಸದ್ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬಂದಿದ್ದ ಕೆಲ ರೋಗಿಗಳ ಜತೆಯೂ ಶಿವಯೋಗಿ ಕಳಸದ್ ಅವರು ಸಮಾಲೋಚನೆ ನಡೆಸಿ ಧೈರ್ಯ ಹೇಳಿದ್ರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ತನಿಖಾಧಿಕಾರಿ‌ ಶಿವಯೋಗಿ ಕಳಸದ್, ತನಿಖೆ ಪ್ರಾಥಮಿಕ ಹಂತದಲ್ಲಿದೆ ಜಿಲ್ಲಾಸ್ಪತ್ರೆಯಲ್ಲಿ ಈಗ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ ಡಿಸಿ, ಡೀನ್, ಡಿಎಚ್ ಓ ಹಾಗೂ ಆರೋಗ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಜಿಲ್ಲಾಸ್ಪತ್ರೆಯ ಕೊವೀಡ್ ರೋಗಿಗಳು ಹಾಗೂ ಆಕ್ಸಿಜನ್ ಪ್ಲಾಂಟ್ ಗೂ ಭೇಟಿ ನೀಡಿ‌ ಮಾಹಿತಿ‌ ಪಡೆದಿದ್ದೇನೆ. ಇಂದು ಅಥವಾ ನಾಳೆ ಮೈಸೂರು ಆಕ್ಸಿಜನ್ ಪ್ಲಾಂಟ್ ಗೆ ಭೇಟಿ ನೀಡಿ ಅಲ್ಲಿಯೂ ಸಹ ಮಾಹಿತಿ ‌ಪಡೆಯುತ್ತೇನೆ. ಎಲ್ಲಾ ವಿಚಾರದ ಸಮಗ್ರ ವರದಿ ಹಾಗೂ ಅಂಕಿ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು. : - -- –- -