ಮೈಸೂರಲ್ಲಿ ಹೊಸದಾಗಿ 2 ಕೊರೊನಾ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಅನುಮತಿ ಕೋರಿ ಡಿಸಿ ರೋಹಿಣಿ ಸಿಂಧೂರಿ ಬರೆದ ಪತ್ರಕ್ಕೆ ಸರಕಾರದ ‘ ನಿರುತ್ತರ ‘.. ಮೈಸೂರು,ಏ.28,2021 : (.. )ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ `ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಮತ್ತು ‘ ಪಿಕೆಟಿಬಿ ಆಸ್ಪತ್ರೆ’ ಗಳಲ್ಲಿ ತಕ್ಷಣವೇ ಕೋವಿಡ್ ಚಿಕಿತ್ಸಾ ಸೌಲಭ್ಯ ಆರಂಭಿಸಲು ಅನುಮತಿ ಕೋರಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರಕಾರಕ್ಕೆ ಪತ್ರ ಬರೆದು ಮೂರು ದಿನಗಳಾದರು ಇನ್ನು ಹಸಿರುನಿಶಾನೆ ನೀಡದಿರುವುದು ಜಿಲ್ಲಾಡಳಿತದ ಕೈಕಟ್ಟಿ ಹಾಕಿದೆ.ನಗರದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೇಂದ್ರಗಳಿಗೆ ಸ್ಥಳೀಯರಷ್ಟೇ ದಾಖಲಾಗುತ್ತಿಲ್ಲ. ಬೆಂಗಳೂರು ಮತ್ತು ನೆರೆಯ ಜಿಲ್ಲೆ ಗಳಿಂದಲೂ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಮೈಸೂರು ನಗರಕ್ಕೆ ಧಾವಿಸುತ್ತಿದ್ದಾರೆ. ಇದರಿಂದಾಗಿ ಮೈಸೂರು ಜಿಲ್ಲೆಯಲ್ಲಿನ ಕೋವಿಡ್-19 ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಆದ್ದರಿಂದ ಮೈಸೂರು ನಗರದಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳ ಸಂಖ್ಯೆ ತಕ್ಷಣ ಹೆಚ್ಚಿಸ ಬೇಕಿದೆ. ಜತೆಗೆ ಹೊಸ ಚಿಕಿತ್ಸಾ ಕೇಂದ್ರಗಳನ್ನೂ ಆರಂಭಿಸಬೇಕಿದೆ. ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಬೇಕಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಅವರಿಗೆ ಏ.25 ರಂದು ಬರೆದಿರುವ ಪತ್ರದಲ್ಲಿ ಜಿಲ್ಲೆಯಲ್ಲಿನ ಸದ್ಯದ ಪರಿಸ್ಥಿತಿ, ಪ್ರಸ್ತುತ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು, ತಕ್ಷಣಕ್ಕೆ ಬೇಕಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿ ವಿವರಿಸಿದ್ದರು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರೆ 20 ಸಾವಿರ ಲೀ. ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಬೇಕು. ಅಷ್ಟರವರೆಗೆ ಗಂಭೀರ ಸ್ವರೂಪದ ರೋಗಿಗಳಿಗೆ ಆಮ್ಲಜನಕ ಪೂರೈಸಲು 20 ಡ್ಯೂರಾ ಆಕ್ಸಿಜನ್ ಸಿಲಿಂಡರ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸರ್ಕಾರ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.ಆದರೆ, ಈ ಪತ್ರ ಬರೆದು ಮೂರು ದಿನಗಳೇ ಕಳೆದರು ಇನ್ನು ರಾಜ್ಯ ಸರಕಾರದಿಂದ ಈತನಕ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಇದು ಜಿಲ್ಲಾಡಳಿತವನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೆಚ್ಚುವರಿ ವೆಂಟಿಲೇಟರ್ ಗೆ ಮನವಿ…. ಇನ್ನು ಮೈಸೂರು ಜಿಲ್ಲೆಗೆ ಹೆಚ್ಚುವರಿಯಾಗಿ ಕನಿಷ್ಠ 50 ವೆಂಟಿಲೇಟರ್ ಗಳನ್ನ ಒದಗಿಸುವಂತೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರು ಸರ್ಕಾರಕ್ಕೆ ಏಪ್ರಿಲ್ 24 ರಂದೇ ಪತ್ರ ಬರೆದಿದ್ದಾರೆ. ಆದರೂ ಸಹ ಈವರೆಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. : --------