ಕುಂಟುನೆಪ ಹೇಳಿ ಹೊರಗೆ ಬಂದ್ರೆ ಹುಷಾರ್- ಎಚ್ಚರಿಕೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬೆಂಗಳೂರು,ಏಪ್ರಿಲ್,23,2021(..):ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾರಿಯಾಗಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕುಂಟು ನೆಪಹೇಳಿ ಹೊರಗೆ ಬಂದ್ರೆ ಅರೆಸ್ಟ್ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಕುಂಟು ನೆಪಹೇಳಿ ಹೊರಗೆ ಬಂದ್ರೆ ಬಂಧಿಸುತ್ತೇವೆ. ರಾತ್ರಿ 9 ರಿಂದ ಯಾರೂ ಹೊರಗೆ ಬರುವಂತಿಲ್ಲ. ಅನಗತ್ಯವಾಗಿ ವಾಹನ ರಸ್ತೆಗಿಳಿಸಿದೆರೇ ವಾಹನ ಸೀಜ್ ಮಾಡಲಾಗುತ್ತದೆ. ಜನರು ವಿಕೆಂಡ್ ಕರ್ಫ್ಯೂಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಸ್ವಿಗ್ಗಿ ಹಾಗೂ ಜೊಮ್ಯಾಟೋ ಟೀ-ಶರ್ಟ್ ಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಟೀ-ಶರ್ಟ್ ಧರಿಸಿ, ಹಲವರು ಹೋಂ ಡಿಲೆವರಿ ನೆಪ ಹೇಳಿ ಓಡಾಟ ನಡೆಸುತ್ತಿದ್ದಾರೆ. ಇಂತವರು ಸಿಕ್ಕಿಬಿದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಕಮಲ್ ಪಂತ್ ತಿಳಿಸಿದರು. ಇನ್ನು ಮದುವೆ ಸಮಾರಂಭಗಳಿಗೂ ಸಮಯ ನಿಗದಿ ಮಾಡಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಅನುಮತಿ ಪಡೆದವರು ಕಲ್ಯಾಣ ಮಂಟಪಗಳಿಗೆ ಇಂದು ರಾತ್ರಿ 9ಗಂಟೆ ಒಳಗಾಗಿ ಹೋಗಿ ತಲುಪಬೇಕು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು. : - - –