ಹೆಲಿ ಟೂರಿಸಂಗಾಗಿ ವೃಕ್ಷವಧೆ ಬೇಡ-ಆರ್ ರಘು ಕೌಟಿಲ್ಯ ಆಕ್ಷೇಪ… ಮೈಸೂರು,ಏಪ್ರಿಲ್,14,2021(..):ಪ್ರವಾಸೋದ್ಯಮ ಇಲಾಖೆ ಕೈಗೊಳ್ಳಲು ಮುಂದಾಗಿರುವ ಹೆಲಿ ಟೂರಿಸಂ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಆದರೆ ವನ್ಯ ಸಂಪತ್ತನ್ನು ನಾವು ಕಾಪಾಡಲು ಹಾಗೂ ಪರಿಸರ ಉಳಿಸುವ ಬಹುದೊಡ್ಡ ಜಾಗೃತಿ ವಹಿಸುವ ಜವಾಬ್ದಾರಿಯನ್ನು ನಾವು ತೋರಬೇಕಿದೆ. ಆ ನಿಟ್ಟಿನಲ್ಲಿ ಸಸ್ಯ ಸಂಪತ್ತು, ವನ ಸಂಪತ್ತನ್ನು ಉಳಿಸಬೇಕಿರುವುದು ನಮ್ಮ ಮೊದಲ ಆದ್ಯ ಕರ್ತವ್ಯ ಎಂದು ಆರ್.ರಘು ಕೌಟಿಲ್ಯ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಆರ್.ರಘುಕೌಟಿಲ್ಯ, ಲಲಿತಮಹಲ್ ಆವರಣದಲ್ಲಿ 150 ಮರಗಳನ್ನು ಕಡಿದು ಹೆಲಿ ಟೂರಿಸಂ’ ಮಾಡುವ ಯಾವ ಅನಿವಾರ್ಯತೆಯೂ ಇಲ್ಲ. ಪರ್ಯಾಯ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆ ಹುಡುಕಿಕೊಳ್ಳಲಿ. ಒಂದು ವೇಳೆ ಮರಗಳನ್ನು ಕಡಿಯುವುದಾದರೆ ನನ್ನ ಆಕ್ಷೇಪವಿರುತ್ತದೆ. ನಾನೊಬ್ಬ ಪರಿಸರ ಪ್ರೇಮಿಯಾಗಿ ಮತ್ತು ಪಾರಂಪರಿಕ ಮೈಸೂರಿನ ನಾಗರೀಕನಾಗಿ ಈ ಹೇಳಿಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮೈಸೂರು ಅರಮನೆಗಳ ಹಾಗೂ ಸಾಂಸ್ಕೃತಿಕ ನಗರಿ ಎಂದು ಹೆಮ್ಮೆ ಪಡುತ್ತೇವೆ ಹಾಗೆಯೇ, ನಮ್ಮ ಮಹಾರಾಜರು ಈ ಭಾಗದಲ್ಲಿ ಸಸ್ಯ ಸಂಪತ್ತು, ಧಾನ್ಯ ಸಂಪತ್ತು, ಜಲ ಸಂಪತ್ತು ಹಾಗೂ ವೃಕ್ಷ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ. ಅದನ್ನು ಬೆಳೆಸಬೇಕೇ ಹೊರತು ಅದನ್ನು ವಿನಾಶ ಮಾಡುವ ಯಾವ ಹಕ್ಕು ನಮಗಿಲ್ಲ. ಈ ಕ್ರಮವನ್ನು ಮೈಸೂರು ಮಹಾಜನತೆ ಎಂದಿಗೂ ಒಪ್ಪಲಾರರು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಲಲಿತ ಮಹಲ್ ಬಳಿ ಹೆಲಿ ಟೂರಿಸಂ ಪ್ರಾರಂಭಿಸುವ ನಿರ್ಧಾರವನ್ನು ಕೈಬಿಡಲಿ ಎಂದು ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತಿರುವುದಾಗಿ ಆರ್. ರಘು ಕೌಟಿಲ್ಯ ತಿಳಿಸಿದ್ದಾರೆ. : - -- - .