“ಇಂದಿರಾ ಕ್ಯಾಂಟೀನ್ ಉಳಿಸಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ನಿಧಿ ಸಂಗ್ರಹ ಅಭಿಯಾನ” ಮೈಸೂರು,ಏಪ್ರಿಲ್,09,2021(..) :ಇಂದಿರಾ ಕ್ಯಾಂಟೀನ್ ಗೆ ಬಜೆಟ್ ನಲ್ಲಿ ಹಣ ನೀಡದೆ ದ್ರೋಹ ಬಗೆಯಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಇಂದಿರಾ ಕ್ಯಾಂಟೀನ್ ಉಳಿಸಿ ನಿಧಿ ಸಂಗ್ರಹ ಅಭಿಯಾನ ನಡೆಸಲಾಯಿತು. ಶುಕ್ರವಾರ ಕಾಡಾ ಕಛೇರಿ ಬಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು , ದುಡಿದು ತಿನ್ನುವ ಬಡಜನರಿಗೆ ಕಡಿಮೆ ದರದಲ್ಲಿ ಊಟೋಪಚಾರ ಒದಗಿಸಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಹಳ್ಳ ಹಿಡಿಯುವಂತೆ ಮಾಡಲಾಗುತ್ತಿದೆ ಎಂದು ದೂರಿದರು. ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಡವರ ವಿರೋಧಿಯಾಗಿದ್ದಾರೆ. ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ 2017ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತು. ಕಡು ಬಡತನದಲ್ಲಿರುವ ಕೂಲಿಕಾರ್ಮಿಕರು, ಆಟೋ, ಮತ್ತು ಟ್ಯಾಕ್ಸಿ ಚಾಲಕರು ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬರುವ ಬಡ ಜನರಿಗೆ ಕಡಿಮೆ ದರದಲ್ಲಿ ಊಟ ಉಪಹಾರವನ್ನು ಪೂರೈಸುವ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್ ಮಾಡುತ್ತಿತ್ತು ಎಂದು ವಿವರಿಸಿದರು. ಇದರಿಂದ ಲಕ್ಷಾಂತರ ಮಂದಿ ಬಡವರಿಗೆ ಉಪಯೋಗವಾಗುತ್ತಿತ್ತು. ಒಂದು ವರ್ಷಕ್ಕೆ 200 ಕೋಟಿ ರೂ. ಸರ್ಕಾರ ನೀಡಿದರೆ ಇಂದಿರಾ ಕ್ಯಾಂಟೀನ್ ಅನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಬಹುದು. ಆದರೆ, 2.5ಲಕ್ಷ ಕೋಟಿ ಬಜೆಟ್ ಮಂಡಿಸಿರುವ ರಾಜ್ಯ ಸರ್ಕಾರ 200 ಕೋಟಿ ಅಲ್ಪ ಮೊತ್ತವನ್ನು ಬಡವರ ಯೋಜನೆಗೆ ನೀಡದೆ ಇವರನ್ನು ವಂಚಿಸುತ್ತಿರುವುದು ಅಕ್ಷಮ್ಯ ಅಪರಾಧ. ಆ ಮೂಲಕ ಬಿಜೆಪಿ ಬಡವರ ವಿರೋಧಿಯಾಗಿದೆ ಎಂದು ಆರೋಪಿಸಿದರು. ಈಗಲಾದರೂ, ಸರ್ಕಾರ ಎಚ್ಚೆತ್ತು ಬಡವರ ಯೋಜನೆಗಳ ಕತ್ತುಹಿಸುಕದೆ ಇಂತಹ ಯೋಜನೆಗಳಿಗೆ ಅನುದಾನ ಒದಗಿಸಿ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಿ ಕಡುಬಡವರ ಅನ್ನ ನೀಡುವ ಕೆಲಸವಾಗಬೇಕು. ಬಡವರ ಅನ್ನ ಕಸಿಯುವ ಕೆಲಸವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು. ಸಾಂಕೇತಿಕವಾಗಿ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿಗಳ ನಿಧಿಗೆ ಅರ್ಪಿಸುವ ಮೂಲಕ ಹಣ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು. ಅಭಿಯಾನದಲ್ಲಿ ಎಂ.ಲೋಕೇಶ್ ಕುಮಾರ್, ಆರ್ ಕೆ.ರವಿ, ಎಂ.ಮಹೇಂದ್ರ, ರೋಹಿತ್, ಯೋಗೇಶ್, ಹೆಚ್.ಎಸ್.ಪ್ರಕಾಶ್, ದೀಪಕ್ ಪುಟ್ಟಸ್ವಾಮಿ, ಮಹೇಸ್ ಸೋಸಲೆ, ಶೈಲೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು. : - ---------