“ಹುಲಿ, ಚಿರತೆ ಬೇಟೆಯಾಡಿದ್ದ ನಾಲ್ವರ ಬಂಧನ: ಹುಲಿ, ಚಿರತೆಯ ಚರ್ಮ ವಶ” ಮೈಸೂರು,ಮಾ,31,2021(..) :ಉರುಳು, ಜಾ-ಟ್ರ್ಯಾಪ್ ಬಳಸಿ ಹುಲಿ ಮತ್ತು ಚಿರತೆಯೊಂದನ್ನು ಬೇಟೆಯಾಡಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದು, ಆರೋಪಿಗಳಿಂದ ಹುಲಿ, ಚಿರತೆ ಚರ್ಮ, ಬೇಟೆಗೆ ಬಳಸುತ್ತಿದ್ದ ಉರುಳು, ಜಾ-ಟ್ರ್ಯಾಪ್ ಹಾಗೂ ಗೂಡ್ಸ್ ಟೆಂಪೋ ವಶಪಡಿಸಿಕೊಂಡಿದ್ದಾರೆ.ಹುಣಸೂರು ತಾಲೂಕಿನ ನೆಲ್ಲೂರು ಪಾಳ್ಯದ ಅಂಬೇಡ್ಕರ್ ನಗರದ ನಿವಾಸಿಗಳಾದ ಅರುಣ, ನಂಜುಂಡ, ರವಿ ಹಾಗೂ ಕುಟ್ಟೇರಿ ಹಾಡಿಯ ರಮೇಶ್ ಬಂಧಿತ ಆರೋಪಿಗಳು. ಇವರ ಬಂಧನದಿಂದಾಗಿ ೧ ಹುಲಿ, ೧ ಚಿರತೆ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರು ವನ್ಯ ಜೀವಿಗಳನ್ನು ಬೇಟೆಯಾಡುವುದರಲ್ಲಿ ನಿಪುಣರಾಗಿರುವುದು ಕಂಡು ಬಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಜನ ಸಂಚಾರ ವಿರಳವಾಗಿರುವುದನ್ನೇ ಬಂಡವಾಳವನ್ನಾಗಿಸಿಕೊಂಡ ಆರೋಪಿಗಳು ಹುಲಿಯೊಂದನ್ನು ಬೇಟೆಯಾಡಿದ್ದಾರೆ. ೬ ತಿಂಗಳ ಹಿಂದೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಆನೆ ಕಂದಕದವೊಂದರ ಬಳಿ ಆರೋಪಿ ರಮೇಶ ಬೇಟೆಗಾಗಿ ಉರುಳು ಹಾಕಿದ್ದನು. ಈತ ಹಾಕಿದ್ದ ಉರುಳಿಗೆ ಮರುದಿನವೇ ಬಾರಿ ಗಾತ್ರದ ಹುಲಿಯೊಂದು ಸಿಲುಕಿ ಸಾವನ್ನಪ್ಪಿದೆ. ಉರುಳಿಗೆ ಹುಲಿ ಬಲಿಯಾಗಿರುವುದನ್ನು ಕಂಡ ರಮೇಶ, ತನಗೆ ಪರಿಚಯವಿದ್ದ ರವಿ ಎಂಬಾತನಿಗೆ ತಿಳಿಸಿದ್ದಾನೆ. ಕೂಡಲೇ ಆರೋಪಿ ರವಿ, ತನ್ನ ಮಹೇಂದ್ರ ಜೀಟೊ ವಾಹನದಲ್ಲಿ ಸ್ಥಳಕ್ಕೆ ಬಂದು ಹುಲಿಯ ಮೃತದೇಹವನ್ನು ವಾಹನದಲ್ಲಿ ಹಾಕಿಕೊಂಡು ಅಂಬೇಡ್ಕರ್ ನಗರಕ್ಕೆ ಕೊಂಡೊಯ್ದಿದ್ದಾನೆ. ಮೂರನೇ ಆರೋಪಿ ನಂಜುಂಡ ಹುಲಿಯ ಚರ್ಮ ಸುಲಿದಿದ್ದಾನೆ. ೪ನೇ ಆರೋಪಿ ಅರುಣನ ಮನೆಯಲ್ಲಿ ಹುಲಿ ಚರ್ಮವನ್ನು ಬಚ್ಚಿಟ್ಟು , ಅದೇ ವಾಹನದಲ್ಲಿ ಹುಲಿಯ ಮೃತದೇಹವನ್ನು ಲಕ್ಷ್ಮಣ ತೀರ್ಥನದಿಗೆ ಕೊಂಡೊಯ್ದು ಎಸೆದಿದ್ದಾರೆ. ಈ ನಾಲ್ವರು ಆರೋಪಿಗಳು ವರ್ಷದ ಹಿಂದೆ ಹುಣಸೂರು ತಾಲೂಕಿನ ಟಿಬೇಟ್ ಕಾಲೋನಿ ಬಳಿ ಹುಣಸೇಕಟ್ಟೆ ಎಂಬಲ್ಲಿ ಜಾ- ಟ್ರ್ಯಾಪ್ ಇಟ್ಟು ಚಿರತೆಯೊಂದನ್ನು ಬಲಿಪಡೆದಿದ್ದರು. ಆ ಚಿರತೆಯ ಶವವನ್ನು ಗೂಡ್ಸ್ ವಾಹನದಲ್ಲಿ ಮನೆಗೆ ಕೊಂಡೊಯ್ದು ಚರ್ಮ ಸುಲಿದಿದ್ದರು. ಹುಲಿ ಮತ್ತು ಚಿರತೆ ಚರ್ಮ ಎರಡನ್ನೂ ಅರುಣನ ಮನೆಯಲ್ಲಿ ಬಚ್ಚಿಟ್ಟಿದ್ದರು. ಅರಣ್ಯ ಸಂಚಾರಿ ದಳದಿಂದ ಉತ್ತಮ ಕಾರ್ಯಾಚರಣೆ ಅರುಣನ ಮನೆಯಲ್ಲಿ ಹುಲಿ ಮತ್ತು ಚಿರತೆ ಚರ್ಮ ಇರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆತನ ಬಳಿ ಇರುವುದು ನೈಜ ಚರ್ಮವೇ ಎಂದು ಪರಿಶೀಲಿಸಲು ಗ್ರಾಹಕರ ಸೋಗಿನಲ್ಲಿ ಖರೀದಿಸಲು ತಂತ್ರ ರೂಪಿಸಿದ್ದರು. ೨ ದಿನದ ಹಿಂದೆ ಚರ್ಮ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಬೇಟೆಗಾರರ ಜಾಲದ ಬಗ್ಗೆ ಮಾಹಿತಿ ಕಲೆಹಾಕಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವ ವಹಿಸಿದ್ದ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ವಿವೇಕ್, ಡಿಆರ್‌ಎಫ್‌ಓಗಳಾದ ಲಕ್ಷ್ಮೀಶ, ನಾಗರಾಜ್, ಪ್ರಮೋದ್, ಸುಂಧರ್, ವಿನೋದ್, ಸ್ನೇಹ, ಮೇಘನಾ, ಅರಣ್ಯ ರಕ್ಷಕರಾದ ಚನ್ನಬಸಪ್ಪ, ವಿರೂಪಾಕ್ಷ, ಶರಣಪ್ಪ, ಗೋವಿಂದ, ಕೊಟ್ರೇಶ್, ರವಿಕುಮಾರ್, ಚಾಲಕ ಮಧು ಮತ್ತು ಪುಟ್ಟಸ್ವಾಮಿ ಪಾಲ್ಗೊಂಡಿದ್ದರು. ಚಿರತೆಯನ್ನು ಪಾಲುಹಾಕಿಕೊಂಡು ತಿಂದಿದ್ದಾರೆ ಬಂಧಿತ ನಾಲ್ವರು ಆರೋಪಿಗಳು ಜಾ ಟ್ರ್ಯಾಪ್‌ಗೆ ಸಿಲುಕಿದ್ದ ಚಿರತೆಯನ್ನು ಕೊಂದು ಮನೆಗೆ ತಂದು ಚರ್ಮ ಸುಲಿದು ಪಾಲುಹಾಕಿಕೊಂಡು ತಿಂದು ತೇಗಿರುವ ಆಘಾತಕಾರಿ ವಿಷಯ ತನಿಖೆ ವೇಳೆ ಬಯಲಾಗಿದೆ. ಹುಲಿ ಮೃತದೇಹವನ್ನು ಚರ್ಮ ಸುಲಿದ ನಂತರ ಲಕ್ಷ್ಮಣನದಿಗೆ ಎದೆದಿರುವುದಾಗಿ ಒಪ್ಪಿಕೊಂಡ ಆರೋಪಿಗಳು, ಚಿರತೆ ಮೃತದೇಹದ ಬಗ್ಗೆ ವಿಚಾರಣೆ ನಡೆಸಿದಾಗ ಅದರ ಮಾಂಸವನ್ನು ತಿಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಲ್ಲಿ ರವಿ, ನಂಜುಂಡ ಅರುಣ, ಡೋಂಗ್ರಿ(ಹಕ್ಕಿಪಿಕ್ಕಿ) ಸಮುದಾಯಕ್ಕೆ ಸೇರಿದ್ದರೆ, ಆರೋಪಿ ರಮೇಶ ಆಧಿವಾಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ. : --- ----