ವಿಧಾನಸಭೆಯಲ್ಲಿ ಸಿಡಿ ವಿಚಾರ ಪ್ರಸ್ತಾಪ: ಬಾಂಬೆಗೆ ಹೋದವರಿಗಷ್ಟೇ ಷಡ್ಯಂತ್ರದ ಭಯ ಏಕೆ..? ಸಿದ್ಧರಾಮಯ್ಯ ಪ್ರಶ್ನೆ… ಬೆಂಗಳೂರು,ಮಾರ್ಚ್,22,2021(..):ಬೇರೆ ಯಾರಿಗೂ ಷಡ್ಯಂತ್ರದ ಭಯ ಇಲ್ಲ. ಆದರೆ ಬಾಂಬೆಗೆ ಹೋದವರಿಗಷ್ಟೇ ಷಡ್ಯಂತ್ರದ ಭಯ ಏಕೆ..? ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರಶ್ನಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸಿಡಿ ಬಿಡುಗಡೆಗೂ ಮುನ್ನವೇ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಠಾಣೆಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಾರೆ. ಆದ್ರೇ ದೂರು ನೀಡಿದ್ರೂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳೋದಿಲ್ಲ. ಈ ಮಧ್ಯೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಅದು ನಕಲಿ ಎಂದು ಹೇಳುತ್ತಾರೆ. ಇದಾದ ಬಳಿಕ, ಈ ಸಂಬಂಧ ಸಿಡಿ ರಿಲೀಸ್ ಮಾಡಿದಂತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯನ್ನು ವಿಚಾರಣೆಗೆ ಪೊಲೀಸರು ಕರೆಯುತ್ತಾರೆ. ವಿಚಾರಣೆಗೆ ವಕೀಲರ ಜೊತೆಗೆ ಹಾಜರಾಗಿ, ಹೇಳಿಕೆ ನೀಡಿದ್ದಾರೆ. ಇದೆಲ್ಲಾ ಆದರೂ ಪೊಲೀಸರು ಮಾತ್ರ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸೋದೇ ಇಲ್ಲ. ನಂತರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎನ್ನುತ್ತಿದ್ದ ರಮೇಶ್ ಜಾರಕಿಹೊಳಿ ನೈತಿಕತೆಯ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ರಾಜೀನಾಮೆ ನೀಡಿದ ಬಳಿಕ, 6 ಸಚಿವರು ಕೂಡ ಕೋರ್ಟ್ ನ ಮೊರೆ ಹೋಗಿ, ತಮ್ಮ ವಿರುದ್ಧದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಈ ಮೂಲಕ ಕುಂಬಳಕಾಯಿ ಕಳ್ಳ ಅಂದ್ರೆ.. ಹೆಗಲು ಮುಟ್ಟಿಕೊಟ್ಟಂತೆ ನಡೆದುಕೊಂಡಿದ್ದಾರೆ. ಯಾವುದೇ ಭಯವಿಲ್ಲದೇ ಸಚಿವರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಇವರು, ನ್ಯಾಯಾಲಯದ ರಕ್ಷಣೆ ಯಾಕ್ ಹೋಗಬೇಕು. ಇಂತವರು ಹೇಗೆ ಜನರಿಗೆ ರಕ್ಷಣೆ ನೀಡುತ್ತಾರೆ. ಅವರಿಗೆ ರಕ್ಷಣೆ ಇಲ್ಲ ಎಂದಾದರೇ ಜನರಿಗೆ ರಕ್ಷಣೆ ಎಲ್ಲಿದೆ.? ಅದ್ದರಿಂದ ಆ 6 ಸಚಿವರು ಮಂತ್ರಿಗಳಾಗಿರುವುದೇ ತಪ್ಪು ಎಂದು ಸಿದ್ಧರಾಮಯ್ಯ ಟೀಕಿಸಿದರು. : - - - -.