“ಮೈಸೂರು ವಿವಿಯಲ್ಲಿ ಬೌದ್ಧ ಅಧ್ಯಯನ ಪೀಠ ಸ್ಥಾಪನೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ ಮೈಸೂರು,ಮಾರ್ಚ್,22,2021(..):ಮೈಸೂರು ವಿವಿಯಲ್ಲಿ ಬೌದ್ಧ ಅಧ್ಯಯನ ಪೀಠ ಸ್ಥಾಪನೆಗೆ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ 25 ಲಕ್ಷ ರೂ. ನೀಡುವುದಕ್ಕೆ ಮುಂದಾಗಿದೆ. ಇದಕ್ಕೆ ವಿವಿಯು ನೆರವು ನೀಡಲಿದ್ದು, ಸರ್ಕಾರದಿಂದಲೂ 3 ರಿಂದ 4 ಕೋಟಿ ರೂ. ಹಣ ಪಡೆದು ಪೀಠ ಸ್ಥಾಪನೆ ಮಾಡುವುದಾಗಿ ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ ವ್ಯಕ್ತಪಡಿಸಿದರು.ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯ ತತ್ತ್ವಶಾಸ್ತ್ರ ಅಧ್ಯಯನ ವಿಭಾಗ, ನಳಂದ ಬೌದ್ಧ ವಿಶ್ವವಿದ್ಯಾನಿಲಯ, ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ “ಬೌದ್ಧ ಧಮ್ಮದ ಸಾಮಾಜಿಕ ಮತ್ತು ನೈತಿಕ ಕಳಕಳಿ” ವಿಷಯ ಕುರಿತ ಮೂರು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು. ತತ್ತ್ವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ವೆಂಕಟೇಶ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬೌದ್ಧ ಧರ್ಮವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಬೌದ್ಧ ಅಧ್ಯಯನ ಪೀಠ ಸ್ಥಾಪನೆಗೆ 25 ಲಕ್ಷ ನೀಡುವುದಕ್ಕೆ ಮುಂದೆ ಬಂದಿರುವುದಾಗಿ ಕುಲಪತಿಗಳ ಗಮನಕ್ಕೆ ತಂದರು. ಬಳಿಕ ಈ ಕುರಿತು ಮಾತನಾಡಿದ ಕುಲಪತಿಗಳು, ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಬೌದ್ಧ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಹಣ ನೀಡಲಾಗಿತ್ತು. ತತ್ತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಮಾಡಿದರೆ ಸಂತೋಷ. ಅನೇಕ ವರ್ಷದಿಂದ ಈ ವಿಭಾಗದಲ್ಲಿ ಸ್ವಾಮಿ ವಿವೇಕಾನಂದ ಪೀಠ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಜಗತ್ತು ಕಂಡ ಮಹಾನ್ ಚೇತನಗಳಲ್ಲಿ ಬುದ್ಧ ಒಬ್ಬರು. ಜಗತ್ತಿನ ದುಃಖಕ್ಕೆ ಉತ್ತರ ಕಂಡುಕೊಳ್ಳಲು ತಮ್ಮ ಬದುಕು ಅರ್ಪಿಸಿದವರು ಬುದ್ಧ. ಬೌದ್ಧ ಧರ್ಮದ ಜೀವಾಳ ಪ್ರೀತಿಯಾಗಿದ್ದು, ಶಾಂತಿ ಅದರ ದಿವ್ಯಮಂತ್ರವಾಗಿದೆ. ಅಂಬೇಡ್ಕರ್ ಅವರಿಂದ ಬೌದ್ಧ ಧರ್ಮ ಪುನರುಜ್ಜೀವನಗೊಂಡಿತು. ಮಾನವತ ಧರ್ಮವಾದ ಬೌದ್ಧ ಧರ್ಮಕ್ಕೆ ಆಕರ್ಷಿತರಾಗದವರು ಯಾರು ಇಲ್ಲ ಎಂದು ಹೇಳಿದರು. ಸಂವಿಧಾನದಲ್ಲಿ ಮಾನವೀಯತೆ, ವ್ಯಕ್ತಿ ಸ್ವಾತಂತ್ರ್ಯ, ಸ್ತ್ರೀ ಸಮಾನತೆ ಹೀಗೆ ಬೌದ್ಧತ್ವದ ಅಂಶಗಳಿದೆ. ರಾಷ್ಟ್ರಧ್ವಜದಲ್ಲಿ ಧಮ್ಮ ಚಕ್ರವಿದೆ. ಬುದ್ಧನನ್ನು ವಿವೇಕಾನಂದರು ಶ್ರೇಷ್ಠ ಗುರು ಎಂದಿದ್ದು, ರಾಮಕೃಷ್ಣ ಮಿಷನ್ ಗೆ ಬುದ್ಧನ ಸಂಘವೇ ಸ್ಪೂರ್ತಿ ಎಂದಿದ್ದಾರೆ. ವೈಚಾರಿಕ ವಿಷಯಗಳನ್ನು ಬೌದ್ಧ ಧರ್ಮ ಒಳಗೊಂಡಿದೆ ಎಂದರು. ಜಾತಿ, ಧರ್ಮ, ಬಡವ, ಶ್ರೀಮಂತ, ಸ್ತ್ರೀ, ಪುರುಷ ಎಂಬ ಬೇಧವಿಲ್ಲದ ಈ ಧರ್ಮ ವಿಶ್ವ ಧರ್ಮವಾಗಿದೆ. ಈ ಧರ್ಮದಲ್ಲಿ ದುಃಖದ ನಿವಾರಣಾ ಮಾರ್ಗಗಳನ್ನು ಹಾಗೂ ಪಂಚಶೀಲ ತತ್ತ್ವಗಳನ್ನ ತಿಳಿಸಲಾಗಿದೆ. ಬುದ್ಧನ ಸಂದೇಶಗಳನ್ನು ಎಲ್ಲರೂ ಅನುಸರಿಸುವ ಮೂಲಕ ಶಾಂತಿ, ಹಾಗೂ ಶೀಲವಂತ ದೇಶದ ನಿರ್ಮಾಣಕ್ಕೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು. ತತ್ತ್ವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ವೆಂಕಟೇಶ್ ಈ ತಿಂಗಳು ನಿವೃತ್ತಿಯಾಗಲಿದ್ದು, ವಿವಿಯ ಅನೇಕ ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರುಗಳ ಸಂಖ್ಯೆ ಒಬ್ಬರು, ಇಬ್ಬರು ಎಂಬ ಹಂತಕ್ಕೆ ಬಂದಿದೆ ಎಂದು ತಿಳಿಸಿದರು. ನಳಂದ ಬೌದ್ಧ ವಿಶ್ವವಿದ್ಯಾನಿಲಯ ಉಪಾಧ್ಯಕ್ಷ ಭಂತೆ ಮನೋರಕ್ಖಿತ ಥೇರಾ ಅವರು ಮಾತನಾಡಿ, ದೇಶವು ಜಾತಿ,ಮತ, ಧರ್ಮದ ಹೆಸರಿನಲ್ಲಿ ಹರಿದು ಹಂಚಿಹೋಗುತ್ತಿದ್ದು, ಬುದ್ಧನ ಸಾಮಾಜಿಕ ಕಳಕಳಿಯನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ದೇಶದ ಬಹುಪಾಲು ಸಮಸ್ಯೆಗಳಿಗೆ ಬುದ್ಧ ಧರ್ಮದಲ್ಲಿ ಪರಿಹಾರವಿದೆ ಎಂದರು. ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಬುದ್ಧ ದುಃಖದ ಕುರಿತು ಬಹಳ ಸರಳವಾಗಿ ವಿವರಿಸಿದ್ದರೂ, ನಾವು ಸಂತೋಷವನ್ನು ಬಯಸಿ ದುಃಖದ ಕಡೆಗೆ ಸಾಗುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು. ನಶ್ವರವಾದ ಬದುಕಿನಲ್ಲಿ ಎಷ್ಟು ಅರ್ಥಪೂರ್ಣವಾಗಿ ಬದುಕುತ್ತೇವೆ ಎಂಬುದು ಮುಖ್ಯ. ಬುದ್ಧನ ತತ್ತ್ವಗಳ ಕುರಿತು ಆತ್ಮವಲೋಕನ ಮಾಡಿಕೊಳ್ಳುವ ಮೂಲಕ ಅರ್ಥಪೂರ್ಣ ಹಾಗೂ ಸರಳವಾಗಿ ಬದುಕುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ, ಮಹಾಬೋಧಿ ಭಿಕ್ಕುಗಳ ತರಬೇತಿ ಕೇಂದ್ರ ಪ್ರಾಂಶುಪಾಲ ಭಂತೆ ಬುದ್ಧದತ್ತ, ನಳಂದ ಬೌದ್ಧ ವಿಶ್ವವಿದ್ಯಾನಿಲಯ ಮುಖ್ಯ ಭಿಕ್ಕುಣಿ ಭಿಕ್ಕು,ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ಅಧ್ಯಕ್ಷ ಪ್ರೊ.ತಾಳ್ತಜೆ ವಸಂತ ಕುಮಾರ್, ಪ್ರೊ.ಕೆ.ಅನಂತರಾಮು, ಪ್ರೊ.ಎಸ್‌.ವೆಂಕಟೇಶ್ ಇತರರು ಉಪಸ್ಥಿತರಿದ್ದರು. …. . . ‘ , . 22, 2021 (..): “ . 25 ‘ . . 3 .4 ,” . . , -, . , “ ,” , , . “ , ,” . , , - . “ . ,” .: / / . . / : ------.. -