ಆರು ಸಚಿವರ ಸಿಡಿ ಇರೋದು ನಿಜ: ಆ ಭಯ ಇರುವುದರಿಂದಲೇ ಕೋರ್ಟ್ ಗೆ ಹೋಗಿದ್ದಾರೆ- ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ… ಮೈಸೂರು,ಮಾರ್ಚ್,20,2021(..):ಆರು ಸಚಿವರ ಸಿಡಿ ಇರೋದು ನಿಜ. ಆ ಭಯ ಇರುವುದರಿಂದಲೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ಮಾಧ್ಯಮ ಸಂಸ್ಥೆಗಳು ಸೇರಿದಂತೆ 68 ಜನರ ವಿರುದ್ಧ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ. ಅದರಲ್ಲಿ ನನ್ನ ಹೆಸರನ್ನೂ ಸೇರಿಸಿದ್ದಾರೆ‌. ನನ್ನ ಹೆಸರು ಯಾಕೆ ಸೇರಿಸಿದ್ದಾರೋ ಗೊತ್ತಿಲ್ಲ. ಅದನ್ನು ವೆಕೇಟ್ ಮಾಡಿಸುವ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಅರ್ಜಿ ಹಾಕುತ್ತೇನೆ ಎಂದರು. ರಮೇಶ್ ಜಾರಕಿಹೊಳಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದಾರೆ. ಹಿಂದೆಯೂ ಇಂತಹ ಪ್ರಕರಣಗಳನ್ನು ಗಮನಿಸಿದ್ದೇವೆ‌. ನೇರವಾಗಿ ಸಂತ್ರಸ್ತರು ದೂರು ಕೊಡದೇ ಹೋದರೆ ಕೇಸ್ ನಿಲ್ಲುವುದಿಲ್ಲ. ಇತ್ತೀಚೆಗೆ ನನ್ನ ಪಾತ್ರ ಏನೂ ಇಲ್ಲ ಅಂತ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಿದ್ದೇನೆ. ಅವರ ತಪ್ಪು ಇಲ್ಲದೇ ಇದ್ದರೆ ಹೊರಗೆ ಬರಲು ಏನು ಸಮಸ್ಯೆ ? ಯಾರಿಗೂ ಕಾಣದ ಸ್ಥಳದಲ್ಲಿ ಇದ್ದುಕೊಂಡು ವಿಡಿಯೋ ಬಿಡುಗಡೆ ಮಾಡುವ ಅಗತ್ಯ ಏನಿದೆ ? ರಾಜಕಾರಣಿಯಾದವರು ಎಚ್ಚರಿಕೆ ವಹಿಸಬೇಕು. ಯಾವುದೇ ಹಂತದಲ್ಲೂ ಮೈಮರೆಯಬಾರದು ಎಂದು ರಾಜಶೇಖರ ಮುಲಾಲಿ ತಿಳಿಸಿದರು. ನನ್ನ ಬಳಿ ಯಾವುದೇ ಸಿಡಿ ಇಲ್ಲ. ಇತ್ತೀಚೆಗೆ ಹೋರಾಟಗಾರರ ಬಗ್ಗೆ ಸಂಶಯ ಮೂಡುತ್ತಿದೆ. ನಿನ್ನೆ ಹೋರಾಟಗಾರರಾಗಿ ಹುಟ್ಟಿ ನಾಳೆಗೆ ನಾಪತ್ತೆ ಆಗುತ್ತಾರೆ. ಕೆಲವು ಹೋರಾಟಗಾರರು ಉದ್ದೇಶ ಈಡೇರಿಸಿಕೊಳ್ಳುವ ಸಲುವಾಗಿಯೇ ಬರುತ್ತಾರೆ. ಅಂಥವರ ಬಗ್ಗೆಯೂ ನನಗೆ ಬೇಸರ ಇದೆ. ನಿಜವಾದ ಸಂತ್ರಸ್ತರು ಬಂದರೆ ಹೋರಾಟ ಮಾಡುತ್ತೇನೆ‌. ನನ್ನ ಸ್ವಂತ ಖರ್ಚಿನಲ್ಲಿ ಸುಪ್ರೀಂ ಕೋರ್ಟ್ ವರೆಗೂ ಕೇಸ್ ನಡೆಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ರಾಜಶೇಖರ ಮುಲಾಲಿ ತಿಳಿಸಿದರು. : ’- – - - - .