ನಂಜನಗೂಡು ರಥೋತ್ಸವ ‌ರದ್ದು ಮಾಡಿದ್ದು ಖಂಡನೀಯ- ಮೈಸೂರು ಡಿಸಿ ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ… ಮೈಸೂರು,ಮಾರ್ಚ್,19,2021(..):ಕೊರೋನಾ 2ನೇ ಅಲೆ ಹಿನ್ನೆಲೆ ನಂಜನಗೂಡು ಜಾತ್ರಾ ಮಹೋತ್ಸವ ರದ್ದುಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಹಾರ್ಡಿಂಜ್ ವೃತ್ತದ ಬಳಿ ಉರುಳುಸೇವೆ ಮಾಡಿ ಧೂಪ ಸಾಂಬ್ರಾಣಿ ಹಾಕಿ ವಿಶೇಷ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಯಿಂದ ಸರ್ವಾಧಿಕಾರಿ ಧೋರಣೆ. ಆಂಧ್ರ ಮೂಲದ ಜಿಲ್ಲಾಧಿಕಾರಿಗೆ ನಮ್ಮ ಸಂಸ್ಕೃತಿ, ಆಚರಣೆ ಬಗ್ಗೆ ಗೊತ್ತಿಲ್ಲ. ನಂಜನಗೂಡು ರಥೋತ್ಸವ ‌ರದ್ದು ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು. ಹಾಗೆಯೇ ಅವರು ಅತ್ತು, ಕರೆದು ಮೈಸೂರಿಗೆ ವರ್ಗ ಮಾಡಿಸಿಕೊಂಡಿದ್ದಾರೆ. ಆದೇಶ ಮಾಡುವ ಮುಂಚೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳ ಸಲಹೆ ಪಡೆಯಬೇಕು. ಸಿನಿಮಾ ಥಿಯೇಟರ್ ಬಂದ್ ಆಗಿಲ್ಲ, ಬಸ್ಸು, ರೈಲ್ವೆ ಬಂದ್ ಮಾಡಿಲ್ಲ. ಆದರೆ ರಥೋತ್ಸವವನ್ನ ಮಾತ್ರ ಯಾಕೆ ರದ್ದು ಮಾಡಿದ್ದೀರಾ. ನಿಮಗೆ ನಂಜನಗೂಡಿನ ಇತಿಹಾಸ ಗೊತ್ತಿದ್ರೆ ಹೀಗೆ ಮಾಡ್ತಿರಲಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು. ಯಡಿಯೂರಪ್ಪ ಕರ್ನಾಟಕ ಕಂಡರಿಯದ ಸರ್ವಾಧಿಕಾರಿ ಮುಖ್ಯಮಂತ್ರಿ… ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಶಾಸನಸಭೆಯಲ್ಲಿ ಏನೇನು ಚರ್ಚೆ ಆಗಬೇಕಿತ್ತು ಅದ್ಯಾವುದು ಆಗುತ್ತಿಲ್ಲ. ಅದು ವಿಧಾನಸಭೆ ಆಗಿಲ್ಲ, ಸರ್ವಾಧಿಕಾರಿ ಯಡಿಯೂರಪ್ಪ ಅವರ ಸಭೆಯಾಗಿದೆ ಸರ್ವಾಧಿಕಾರಿ ಹೇಳಿದ ಹಾಗೆ ಸ್ಪೀಕರ್ ಕೇಳುತ್ತಿದ್ದಾರೆ, ಮಂತ್ರಿಗಳು ಶಾಸಕರುಗಳು ಸಹ ಸರ್ವಾಧಿಕಾರಿ ಏಜೆಂಟ್ ಗಳಾಗಿದ್ದಾರೆ. ಯಡಿಯೂರಪ್ಪ ಕರ್ನಾಟಕ ಕಂಡರಿಯದ ಸರ್ವಾಧಿಕಾರಿ ಮುಖ್ಯಮಂತ್ರಿ ಎಂದು ಹರಿಹಾಯ್ದರು. : - –- - –--