ಯಾವುದೇ ಜಾತಿಯಲ್ಲಿನ ಉಳ್ಳವರಿಗೆ ಮೀಸಲಾತಿ ಬೇಡ- ಎಂಎಲ್ ಸಿ ಹೆಚ್.ವಿಶ್ವನಾಥ್ ಮೈಸೂರು,ಮಾರ್ಚ್,19,2021(..):ರಾಜ್ಯದಲ್ಲಿ ಮೀಸಲಾತಿ ಪರವಾದ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಯಾವುದೇ ಜಾತಿಯಲ್ಲಿನ ಉಳ್ಳವರಿಗೆ ಮೀಸಲಾತಿ ಬೇಡ ಎಂದು ಹೇಳಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ನನಗೆ ಸಿದ್ದರಾಮಯ್ಯಗೆ, ಎಂಟಿಬಿ ನಾಗರಾಜ್‌ ಗೆ ದುಡ್ಡು ಮಾಡಿರೋ ಈಶ್ವರಪ್ಪನಿಗೆ ಎಸ್‌ ಟಿ ಮೀಸಲಾತಿ ಕೇಳುತ್ತಿದ್ದೇವಾ..?ಶ್ರೀನಿವಾಸ್ ಪ್ರಸಾದ್ ಹಾಗೂ ಮಕ್ಕಳಿಗೆ. ಖರ್ಗೆ ಮತ್ತು ಮಕ್ಕಳಿಗೆ, ಗೋವಿಂದ ಕಾರಜೋಳ ಹಾಗೂ ಮಕ್ಕಳಿಗೆ ಮೀಸಲಾತಿ ಅವಶ್ಯಕತೆ ಇದೆಯಾ? ಯಾವ ಸಮುದಾಯದಲ್ಲಿ ಬಡವರಿದ್ದಾರೋ ಅವರಿಗಾಗಿ ಮೀಸಲಾತಿ‌ ಹೋರಾಟ ಮಾಡುತ್ತಿದ್ದೇವೆ. ನನ್ನ ಅಭಿಪ್ರಾಯದಲ್ಲಿ ಎಲ್ಲ ಸಮುದಾಯದಲ್ಲಿ ಉಳ್ಳವರಿಗೆ ಮೀಸಲಾತಿ ಬೇಡ ಎಂದು ಹೇಳಿದರು. ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯುತ್ತಿಲ್ಲ… ಬಜೆಟ್ ಅಧಿವೇಶನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯುತ್ತಿಲ್ಲ. ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ. ಈ ಸದನ ಮೆಕ್ಯಾನಿಕಲ್ ಆಗಿ ನಡೆಯುತ್ತಿದೆ. ಸದನ ಮುಗಿದರೆ ಸಾಕು ಎನ್ನುವ ರೀತಿ ಸದನದ ಚರ್ಚೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋರ್ಟ್‌ಗೆ ಹೋಗಿರುವ 6 ಸಚಿವರಿಂದ ಉತ್ತರ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ನಿರ್ಧಾರಕ್ಕೆ ಕಿಡಿಕಾರಿದ ಹೆಚ್.ವಿಶ್ವನಾಥ್, ಅವರು ಪಕ್ಷಾಂತರಿಗಳು ಎನ್ನುವ ಕಾರಣಕ್ಕೆ ಅವರಿಂದ ಕಾಂಗ್ರೆಸ್ ಉತ್ತರ ಪಡೆಯುತ್ತಿಲ್ಲ. ಕೋರ್ಟ್‌ಗೆ ಹೋದ ತಕ್ಷಣ ಆ ಸಚಿವರು ಅಸ್ಪೃಶ್ಯರೆ’ ಅದರಲ್ಲಿ ತಪ್ಪೇನಿದೆ. ಯಾರ ಮಾನ ಯಾರು ಏನೇನು ಇಟ್ಟುಕೊಂಡು ಕಳೆಯುತ್ತಾರೋ ಗೊತ್ತಿಲ್ಲ. ನಾಳೆ ಸುಖಸುಮ್ಮನ್ನೇ ಮರ್ಯಾದೆ ಕಳೆದುಕೊಳ್ಳಬಾರದೆಂದು ಕೋರ್ಟ್‌ಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜಕಾರಣ ಎಂಬುದು ಕೇವಲ ಕೆಸರೆರಾಚಾಟ ಆಗಿದೆ. ಸಚಿವರ ಉತ್ತರ ಯಾವುದೋ ಪಕ್ಷಕ್ಕಲ್ಲ, ಅದು ರಾಜ್ಯದ ಜನರಿಗೆ. ನಿಮ್ಮದು ಏತಿ ಎಂದರೆ ಕೋತಿ ಎಂಬ ರಾಜಕಾರಣವಾಗಿದೆ. ನಿಮಗೆ ಉತ್ತರ ಬೇಕಿಲ್ಲ, ರಾಜ್ಯದ ಜನರಿಗೆ ಉತ್ತರ ಬೇಕಿದೆ ಎಂದು ಕಾಂಗ್ರೆಸ್ ನಾಯಕರಿಗೆ ಕುಟುಕಿದರು. : –- - -