ಸರ್ಕಾರದ ನಿರ್ಲಕ್ಷ ಖಂಡಿಸಿ ಮುಂದಿನ ವಾರ ಸಭೆ; ಕರ್ನಾಟಕ ಬಂದ್ ಗೆ ದಿನಾಂಕ ನಿಗದಿ-ವಾಟಾಳ್ ನಾಗರಾಜ್… ಬೆಂಗಳೂರು,ಮಾರ್ಚ್,13,2021(..):ಕಾವೇರಿ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮುಂದಿನ ವಾರ ಕನ್ನಡ ಪರ ಸಂಘಟನೆಗಳ ಸಭೆ ನಡೆಸಿ ಕರ್ನಾಟಕ ಬಂದ್ ಗೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು. ತಮಿಳುನಾಡಿನಲ್ಲಿ ನದಿ ಜೋಡಣೆ ಯೋಜನೆ ವಿರೋಧಿಸಿ ಇಂದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಸಿಡಿ ಬಿಟ್ಟರೇ ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ. ಮಹದಾಯಿ ಹೋರಾಟದ ಬಗ್ಗೆ ಚರ್ಚಿಸುತ್ತಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಖಂಡಿಸಿ ಮುಂದಿನ ವಾರ ಕನ್ನಡ ಪರ ಸಂಘಟನೆಗಳ ಸಭೆ ಕರೆಯುತ್ತೇವೆ. ಸಭೆ ನಡೆಸಿ ಕರ್ನಾಟಕ ಬಂದ್ ಗೆ ದಿನಾಂಕ ನಿಗದಿಪಡಿಸಿ ಕರೆ ನೀಡುತ್ತೇವೆ ಎಂದರು. ತಮಿಳುನಾಡು 118 ಕಿ.ಮೀ ಉದ್ದದ ಕಾಲುವೆ ಕಟ್ಟಲು ಮುಂದಾಗಿದ್ದರೂ ಕರ್ನಾಟಕ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ರಾಜ್ಯದ ಸಂಸದರು ಧ್ವನಿ ಎತ್ತರದಿರುವುದು ರಾಜ್ಯದ ಮೇಲಿನ ನಿಷ್ಕಾಳಜಿಯನ್ನು ಪ್ರದರ್ಶಿಸುತ್ತದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು. ಮಹದಾಯಿ ಯೋಜನೆ ಬಗ್ಗೆ ಮಹಾರಾಷ್ಟ್ರ , ಗೋವಾ ಸರ್ಕಾರ ಕಾನೂನು ಹೋರಾಟ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ರಾಜ್ಯದ ಹಿತಾಸಕ್ತಿಯನ್ನು ಮರೆತು ಕುಳಿತಿದೆ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಭದ್ರಪಡಿಸಲು ರಾಜ್ಯ ಬಿಜೆಪಿ ಕಾವೇರಿಯನ್ನು ಬಲಿ ಕೊಡುತ್ತಿದೆ. ಇದರ ವಿರುದ್ಧ ಕನ್ನಡಪರ ಸಂಘಟನೆಗಳೊಂದಿಗೆ ತೀವ್ರ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು. : - – ’- - – - .