ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ, ವಿಶೇಷ ಪೂಜೆ: ಶಿವನನ್ನ ನೋಡಲು ಹರಿದು ಬಂದ ಭಕ್ತಸಾಗರ… ಮೈಸೂರು,ಮಾರ್ಚ್,11,2021(..) :ಇಂದು ಮಹಾಶಿವರಾತ್ರಿ ಹಿನ್ನೆಲೆ. ಮೈಸೂರು ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಮುಂಜಾನೆ 5 ಗಂಟೆಯಿಂದಲೇ ಶಿವಪೂಜೆ ಆರಂಭವಾಗಿದ್ದು, ತ್ರಿನೇಶ್ವರನಿಗೆ ನಗುಸ್ಯಾನ ಪೂರ್ವಕ, ರುದ್ರಭಿಷೇಕ , ಪಂಚಾಮೃತಭಿಷೇಕ ಪೂಜೆ ನೆರವೇರಿಸಲಾಯಿತು. ಅಭಿಷೇಕದ ನಂತರ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಯಿತು. ಚಿನ್ನದ ಕೊಳಗ ಧರಿಸಿದ ಶಿವನನ್ನ ನೋಡಲು ಭಕ್ತಸಾಗರವೇ ಹರಿದು ಬರುತ್ತಿದ್ದು, ಚಿನ್ನದ ಮುಖವಾಡ ಧರಿಸಿದ ಶಿವನನ್ನ ನೋಡಿ ಭಕ್ತರು ಕಣ್ತುಂಬಿಕೊಂಡರು. ಇನ್ನು ಮುಂಜಾನೆ 6 ಗಂಟೆಯಿಂದಲೇ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಇಂದು ಸಂಜೆ ಇದೇ ದೇವಾಲಯದಲ್ಲಿ ಜಾವಗಳ ಪೂಜೆ ನಡೆಯಲಿದ್ದು, ಬೆಳಗಿನ ಜಾವ 4 ಗಂಟೆಯವರೆಗು ಪೂಜೆ ನೆರವೇರಲಿದೆ‌. ಅಂತಿಮವಾಗಿ ಪ್ರಕಾರೋತ್ಸವದ ಮೂಲಕ ಶಿವರಾತ್ರಿ ಪೂಜೆ ಸಮಾಪ್ತಿಯಾಗಲಿದೆ. ನಾಡಿನಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಶಿವರಾತ್ರಿ ಹಿನ್ನೆಲೆ ನಗರದ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಿದ್ದು, ಕಾಮೇಶ್ವರ ಕಾಮೇಶ್ವರಿ ದೇವಾಸ್ಥನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಾ ಶಿವರಾತ್ರಿ ಅಂಗವಾಗಿ 101 ಲಿಂಗಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಶಿವನಿಗೆ ಬಿಲ್ವಪತ್ರೆಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಶಿವನ ದರ್ಶನ ಪಡೆಯಲು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಶಿವನಿಗೆ ಪ್ರಾತಃ ಕಾಲದಿಂದಲೇ ವಿಶೇಷ ಪೂಜೆಯ ಜೊತೆ, ಹಾಲು, ಎಳನೀರು ಕುಂಕುಮಾದಿಗಳ ಅಭಿಷೇಕ ಮಾಡಲಾಗುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಭಕ್ತರು ಪುನೀತರಾದರು. ಕೊರೊನಾ ಆತಂಕ ಕಡಿಮೆಯಾದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತ ಸಮೂಹ ತುಂಬಿ ತುಳುಕುತ್ತಿದೆ. ಹೂಗಳಿಂದ ಅಲಂಕಾರಗೊಂಡ ಶ್ರೀ ಚಂದ್ರಮೌಳೇಶ್ವರ ದೇವಾಲಯ… ಮಹಾಶಿವರಾತ್ರಿ ಪ್ರಯುಕ್ತ ಕೆ.ಜಿ.ಕೊಪ್ಪಲಿನಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಹೂಗಳಿಂದ ಅಲಂಕಾರಗೊಂಡಿದೆ. ಕಾರಂಜಿ ಮಧ್ಯೆ ಪ್ರತಿಷ್ಠಾಪಿಸಲ್ಪಟ್ಟ ಶಿವ ಪಾರ್ವತಿ ಮೂರ್ತಿಗಳು ಭಕ್ತರ ಗಮನ ಸೆಳೆದವು. ದೇವಸ್ಥಾನದ ಆವರಣದೊಳಗೆ ಹೂವಿನ ಮಂಟಪಗಳಲ್ಲಿ ಅಯ್ಯಪ್ಪ ಸ್ವಾಮಿ, ಗಣಪ, ಸುಬ್ರಹ್ಮಣ್ಯ, ಮತ್ತು ಲಿಂಗದ ಪ್ರತಿಷ್ಠಾಪನೆ ಮಾಡಲಾಗಿದ್ದು, ಚಂದ್ರಮೌಳೇಶ್ವರನಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಶಿವನಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳ ಮಜ್ಜನ, ಬೆಳಗಿನ ಜಾವ 5 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ. : ------