ಸಾರಿಗೆ ನಿಗಮ ನೌಕರರಿಗೆ ಗುಡ್ ನ್ಯೂಸ್: ಆಂತರ್ ನಿಗಮ ವರ್ಗಾವಣೆಗೆ ಅವಕಾಶ ನೀಡಿ ಸರ್ಕಾರದಿಂದ ಆದೇಶ…. ಬೆಂಗಳೂರು,ಮಾರ್ಚ್,10,2021(..):ಸಾರಿಗೆ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಸಾರಿಗೆ ನಿಗಮದ ನೌಕರರ ಆಂತರ ನಿಗಮ ವರ್ಗಾವಣೆಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಆದೇಶಿಸಿರುವ ಡಿಸಿಎಂ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ್ ಸವದಿ, ಕರ್ನಾಟಕದ ಸಾರಿಗೆ ನಿಗಮಗಳಲ್ಲಿ ಆಂತರ್ ನಿಗಮ ವರ್ಗಾವಣೆಗೆ ಈವರೆಗೆ ಸೂಕ್ತ ಅವಕಾಶಗಳಿರಲಿಲ್ಲ. ನಮ್ಮ ಸರ್ಕಾರವು ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳಿಗೆ ಸ್ಪಂದಿಸಿ ಇದೇ ಮೊದಲ ಬಾರಿಗೆ ಸಾರಿಗೆ ನಿಗಮದ ನೌಕರರ ಅಂತರ್ ನಿಗಮ ವರ್ಗಾವಣೆಗೆ ಆದೇಶ ಹೊರಡಿಸಿ, ಈ ಬಗ್ಗೆ ಸೂಕ್ತ ನೀತಿ ರೂಪಿಸಿರುವುದು ವಿಶೇಷವಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಹಿಂದೆ 2016ರಲ್ಲಿ ಕೇವಲ ಒಮ್ಮೆ ಮಾತ್ರ ಅಂತರ್ ನಿಗಮ ವರ್ಗಾವಣೆ ಕೈಗೊಳ್ಳಲಾಗಿತ್ತು. ಆದರೆ ಆಂತರ್ ನಿಗಮ ವರ್ಗಾವಣೆ ಬಯಸಿ ಅನೇಕ ಸಿಬ್ಬಂದಿಗಳು ಬೇಡಿಕೆ ಇಟ್ಟಿರುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿವರ್ಷವೂ ಈ ಅಂತರ್ ನಿಗಮ ವರ್ಗಾವಣೆಯನ್ನು ನಿರಂತರ ಪ್ರಕ್ರಿಯೆಯಂತೆ ಕೈಗೊಳ್ಳಲು ಈಗ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಅಂತರ ನಿಗಮ ವರ್ಗಾವಣೆಯ ಪ್ರಕ್ರಿಯೆಯು ಒಂದು ಬಾರಿಗೆ ಮಾತ್ರವಲ್ಲದೆ, ಪ್ರತಿ ವರ್ಷವೂ 01ನೇ ಏಪ್ರಿಲ್ ರಿಂದ 30ನೇ ಏಪ್ರಿಲ್ ರವರೆಗೆ ನಡೆಯುವಂತೆ ಅವಕಾಶ ಕಲ್ಪಿಸಲಾಗಿದೆ, ಪ್ರತಿ ನಿಗಮಗಳಿಂದಲೂ ಪ್ರತಿ ವರ್ಷ ಒಟ್ಟು ಸಿಬ್ಬಂದಿಗಳ ಪ್ರಮಾಣದ ಮೇಲೆ ಶೇಕಡ 2 ರಷ್ಟು ಸಿಬ್ಬಂದಿಗಳಿಗೆ ವರ್ಗಾವಣೆಗೆ ಅವಕಾಶವಾಗುವಂತೆ ಆದೇಶಿಸಲಾಗಿದೆ ಎಂದು ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ವರ್ಗಾವಣೆಗೆ ಅರ್ಹರಾಗಲು ಸಿಬ್ಬಂದಿಗೆ ಈ ಕೆಳಕಂಡ ಅರ್ಹತೆಗಳನ್ನ ನಿಗದಿ ಪಡಿಸಲಾಗಿದೆ. 1) ವರ್ಗಾವಣೆ ಕೋರುವ ನೌಕರರು ಖಾಯಂ ನೌಕರರಾಗಿದ್ದು, ಕನಿಷ್ಠ 10 ವರ್ಷಗಳ ಸೇವೆಯನ್ನು ಮಾತೃ ಸಂಸ್ಥೆಯಲ್ಲಿ ಸಲ್ಲಿಸಿರಬೇಕು. 2) ವರ್ಗಾವಣೆ ಕೋರಿ ಸಲ್ಲಿಸುವ ನೌಕರರು ಅರ್ಜಿಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಮಾತ್ರ ಆದ್ಯತೆಯ ಮೇಲೆ ಪರಿಗಣಿಸಲಾಗುವುದು. 3) ಅಂತರ್‌ನಿಗಮ ವರ್ಗಾವಣೆ ಕೋರುವ ನೌಕರರು ಆನ್‌ಲೈನ್ ಪೋರ್ಟಲ್ ತಂತ್ರಾಂಶದ ಮೂಲಕ ನಿಗದಿಪಡಿಸಿದ ಅರ್ಜಿ ನಮೂನೆ/ಇಚ್ಛಾಪತ್ರವನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು, 4) ನೌಕರನು ಒಂದು ಬಾರಿಗೆ ಶಾಶ್ವತವಾಗಿ ವರ್ಗಾವಣೆಯಾದ ನಂತರ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ಹಿಂಪಡೆಯು / ಬದಲಾಯಿಸಲು ಅವಕಾಶವಿರುವುದಿಲ್ಲ. 5) ನೌಕರರ ಮೇಲೆ ಶಿಸ್ತು ಪ್ರಕರಣಗಳು ಬಾಕಿ ಇದ್ದಲ್ಲಿ ಅವರು ವರ್ಗಾವಣೆಗೆ ಅರ್ಹರಾಗಿರುವುದಿಲ್ಲ. 6) ಒಮ್ಮೆ ವರ್ಗಾವಣೆಯಾದ ನೌಕರರು ಸೇವಾವಧಿಯಲ್ಲಿ ಪುನ: ಅಂತರ್ ನಿಗಮ ವರ್ಗಾವಣೆಗೆ ಅರ್ಹರಾಗುವುದಿಲ್ಲ. 7) ಹೈದ್ರಾಬಾದ್-ಕರ್ನಾಟಕ ಸ್ಥಳೀಯ ಅಭ್ಯರ್ಥಿ ಎಂದು ಮೀಸಲಾತಿ ಬಯಸುವ ನೌಕರರು ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿ ಎಂಬ ಬಗ್ಗೆ ಸೂಕ್ತ ಪ್ರಾಧಿಕಾರ ನೀಡಿರುವ ಪ್ರಮಾಣ ಪತ್ರ ಸಲ್ಲಿಸುವುದು. 8) ಪ್ರತಿ ವೃಂದದಲ್ಲಿನ ಅಂತರ ನಿಗಮ ವರ್ಗಾವಣೆಯ ಶೇಕಡ 5 ರಷ್ಟು ಹುದ್ದೆಗಳನ್ನು ಪತಿ-ಪತ್ನಿ ನೌಕರರಿಗೆ (ಇಬ್ಬರು ನಿಗಮದ ನೌಕರರಾಗಿರತಕ್ಕದ್ದು) ಜೇಷ್ಠತೆಯ ಆಧಾರದ ಮೇಲೆ ಪರಿಗಣಿಸಲಾಗುವುದು. : – - - – – – .