ಉಚಿತ ಪಡಿತರ ವಿತರಣೆ: ಹಣ ಪಡೆಯುವ ಪ್ರಸ್ತಾವನೆ ಇಲ್ಲ -ಆಹಾರ ಸಚಿವ ಉಮೇಶ್ ಕತ್ತಿ… ಬೆಂಗಳೂರು,ಮಾರ್ಚ್.9,2021(..):ಹಿಂದಿನ ಸರ್ಕಾರದಂತೆ ಉಚಿತವಾಗಿ ಪಡಿತರ ನೀಡುವ ಪರಿಪಾಠವನ್ನು ಮುಂದುವರೆಸಿದ್ದೇವೆ. ಸದ್ಯಕ್ಕೆ ಇದಕ್ಕೆ ಹಣ ಪಡೆಯುವ ಪ್ರಸ್ತಾವನೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಗಾಗಿ ದರ ನಿಗದಿ ಮಾಡಲು ಪರಿಶೀಲಿಸಲಾಗುವುದು ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದರು. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಉಮೇಶ್ ಕತ್ತಿ, ಪಡಿತರ ಅಂಗಡಿಗಳ ಮೂಲಕ ಆದ್ಯತಾ ಪಡಿತರಚೀಟಿಗಳಿಗೆ ಸದ್ಯಕ್ಕೆ ಉಚಿತವಾಗಿ ಅಕ್ಕಿ, ಗೋಧಿ ಹಾಗೂ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 10,90,951 ಅಂತ್ಯೋದಯ ಅನ್ನ ಪಡಿತರ ಚೀಟಿಗಳು, 1,16,83,545 ಆದ್ಯತಾ ಪಡಿತಚೀಟಿಗಳು ಸೇರಿ 1.27 ಕೋಟಿ ಪಡಿತರಚೀಟಿಗಳಿವೆ. ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿಗೆ 35 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದ್ಯತಾ ಪಡಿತರಚೀಟಿದಾರರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡುತ್ತಿದ್ದೇವೆ ಎಂದರು. ಬಿಪಿಎಲ್ ಮಾನದಂಡಗಳನ್ನಾಗಲಿ ಅಥವಾ ಬೇರೆ ಯಾವುದೇ ಹೊಸ ತಿದ್ದುಪಡಿಗಳನ್ನು ನಾವು ರೂಪಿಸಿಲ್ಲ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರ ರೂಪಿಸಿದ ನಿಯಮಗಳನ್ನೇ ಮುಂದುವರೆಸಿದ್ದೇವೆ. ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವವರಿಗೆ ದಿನವೊಂದಕ್ಕೆ 272 ರೂ. ಕೂಲಿ ನೀಡುತ್ತಿದ್ದೇವೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದರು. : –- - - -