ಮಹಿಳೆಯರೇ ಸಮಾಜದ ಶಕ್ತಿ- ಸಚಿವ ಡಾ. ನಾರಾಯಣಗೌಡ ಬಣ್ಣನೆ.. ಬೆಂಗಳೂರು ಮಾರ್ಚ್,8,2021(..):ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಮಹಿಳೆಗೆ ಇದೆ. ಮಹಿಳೆ ಶಿಕ್ಷಣದಲ್ಲಿ ಸಾಧನೆ ಮಾಡಬೇಕು, ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು. ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಇವರ ವತಿಯಿಂದ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಿಂಗ ಸಮಾನತೆಗಾಗಿ ಎನ್ಎಸ್ಎಸ್ ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ನಾರಾಯಣಗೌಡ, ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಹೆಣ್ಣುಮಕ್ಕಳ ಕೊಡುಗೆ ಅಪಾರ. ಸನ್ಮಾನ್ಯ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಯಾದ ಬೇಟಿ ಬಚಾವ್, ಬೇಟಿ ಪಡಾವ್ ಕಾರ್ಯಕ್ರಮ ವಿಶ್ವಾದ್ಯಂತ ಜನಮನ್ನಣೆ ಗಳಿಸಿದೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಅದ್ವಿತೀಯ ಸಾಧನೆ ತೋರುತ್ತಿದ್ದು, ದೇಶದ ಆರ್ಥಿಕ ವೃದ್ಧಿಯಲ್ಲಿ, ಸಮಾಜದ ಸ್ವಾಸ್ತ್ಯವನ್ನು ಸಮತೋಲನದಲ್ಲಿಡಲು ಪ್ರಮುಖ ಪಾತ್ರವಹಿಸುತ್ತಿರುವುದನ್ನು ಗಮನಿಸಬಹುದು. ಮುಖ್ಯಮುಂತ್ರಿಗಳಾದ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವಾರು ವಿನೂತನ ಕಾರ್ಯಕ್ರಮದ ಮೂಲಕ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ನಮ್ಮ ಕಣ್ಣಮುಂದೆ ನಮ್ಮ ಹೆಣ್ಣುಮಗಳು ಅಪ್ರತಿಮ ಸಾಧನೆಗೈಯುವುದನ್ನ ನೋಡುವುದೆ ಮಹದಾನಂದ ಎಂದು ಸಚಿವ ನಾರಾಯಣಗೌಡ ಬಣ್ಣಿಸಿದರು. ಆ ನಿಟ್ಟಿನಲ್ಲಿ ಇಂದು ಅರ್ಥಪೂರ್ಣವಾಗಿ ದಿನಪೂರ್ತಿ ಮಹಿಳೆಯರಿಗಾಗಿಯೆ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಕ್ರೀಡೆ, ಸಾಹಸ, ವೃತ್ತಿ ಕೌಶಲ್ಯ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯುವತಿಯರಿಗೆ ಉತ್ತೇಜನ ನೀಡಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ಮೋಟಾರ್ ರ್ಯಾಲಿಗೆ ಸಚಿವ ನಾರಾಯಣಗೌಡ ಚಾಲನೆ ನೀಡಿದರು. ಕಂಠೀರವ ಕ್ರೀಡಾಂಗಣದಲ್ಲಿರುವ ಎಲ್ಲ ಬಗೆಯ ಕ್ರೀಡಾ ವಿಭಾಗಗಳಿಗೆ ತೆರಳಿ, ಕ್ರೀಡಾಪಟುಗಳೊಂದಿಗೆ ತಾವೂ ಕ್ರೀಡಾಪಟುವಾಗಿ ಬೆರೆತು ಮಹಿಳಾ ಕ್ರೀಡಾಪಟುಗಳನ್ನ ಹುರಿದುಂಬಿಸಿದರು. ಸಾಹಸ ಕ್ರೀಡಾ ಚಟುವಟಿಕೆಯಾದ ರ್ಯಾಪೆಲ್ಲಿಂಗ್,ಜುಮಾರಿಂಗ್, ಜಿಪ್ ಲೈನ್ ವೀಕ್ಷಿಸಿದರು. ಬಳಿಕ ಬಾಸ್ಕೆಟ್ ಬಾಲ್ , ಕಬ್ಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾಂಗಣಕ್ಕೆ ತೆರಳಿ ಮಹಿಳಾ ಕ್ರೀಡಾಪಟುಗಳ ಸಾಧನೆ ಬಗ್ಗೆ ಮಾಹಿತಿ ಪಡೆದರು. ಹಾಕಿ, ಬ್ಯಾಡ್ಮಿಟನ್, ವಾಲಿಬಾಲ್, ಬಾಸ್ಕೆಟ್ ಬಾಲ್ ಆಟವನ್ನ ಆಡಿ ತಾವೂ ಸಂಭ್ರಮಿಸಿ, ಕ್ರೀಡಾಪಟುಗಳನ್ನೂ ಹುರಿದುಂಬಿಸಿದರು. ಪ್ರತಿನಿತ್ಯ ಕಠಿಣ ಅಭ್ಯಾಸಮಾಡಿ ರಾಜ್ಯ, ರಾಷ್ಟ್ರಕ್ಕೆ ಉತ್ತಮ ಹೆಸರು ತರಬೇಕು ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಲಿಂಗ ಸಮಾನತೆಯ ವಿಷಯವಾಗಿ ಎಲ್ಲಾ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕರು, ವಿಶೇಷವಾಗಿ, ಹುಡುಗರಿಗೆ ಹಾಗೂ ಯುವಕರಿಗೆ ಲಿಂಗ ತಾರತಮ್ಯ ತಡೆಗಟ್ಟುವ ವಿಚಾರ ಕುರಿತು ಸವಿವರವಾಗಿ ಚರ್ಚೆ ನಡೆಸಲಾಯಿತು. ಅಲ್ಲದೆ ಮಹಿಳೆಯರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಎಲ್ಲರಿಗು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕರ್ನಾಟಕ ಓಲಂಪಿಕ್ ಸಂಸ್ಥೆ ಅಧ್ಯಕ್ಷ , ವಿಧಾನ ಪರಿಷತ್ ಸದಸ್ಯರೂ ಆದ ಗೋವಿಂದರಾಜ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲೀನಿ ರಜನೀಶ್, ಇಲಾಖೆ ಆಯುಕ್ತ ಪಿ.ಎನ್. ರವೀಂದ್ರ, ಬೆಂಗಳೂರು ವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಎನ್.ಸತೀಶ್ ಗೌಡ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. : – – - –