ತನ್ವಿರ್ ಸೇಠ್ ಗೆ ರಾಜಕೀಯವಾಗಿ ಅನಾನುಕೂಲವಾದ್ರೆ ಅವರಿಗೆ ಸಂಪೂರ್ಣ ರಕ್ಷಣೆ ಕೊಡುತ್ತೇವೆ- ಹೆಚ್.ಡಿ ಕುಮಾರಸ್ವಾಮಿ.. ಮೈಸೂರು,ಮಾರ್ಚ್,5,2021(..):ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ವಿರುದ್ಧ ಕೈ ನಾಯಕರಿಂದ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿಸಿಎಂ ಹೆಚ್.ಡಿ ಕುಮಾರಸ್ವಾಮಿ, ಒಂದು ವೇಳೆ ತನ್ವಿರ್ ಗೆ ಅನಾನುಕೂಲವಾದರೆ ಜೆಡಿಎಸ್ ಅವರ ಪರ ಇರಲಿದೆ ಎಂದು ಭರವಸೆ ನೀಡಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ. ಅದನ್ನೆಲ್ಲ ನಾನು ನಂಬೋದಿಲ್ಲ. ತನ್ವಿರ್ ಸೇಠ್ ಜೊತೆಯಲ್ಲಿ ನಾವಿದ್ದೇವೆ. ಶಾಸಕ ತನ್ವಿರ್ ಈಗಿನ ಕೆಟ್ಟ ಶಕ್ತಿಗಳನ್ನ ದೂರವಿಡುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದಾರೆ ಎಂದರು. ಹಾಗೆಯೇ ಒಂದು ಕಡೆ ಬಿಜೆಪಿ ದೂರ ಇಡುತ್ತೇವೆ, ಮುಗಿಸುತ್ತೇವೆ ಎಂದು ಹೇಳುವ ಮಹಾನುಭಾವ. ಇನ್ನೊಂದೆಡೆ ಜೆಡಿಎಸ್ ನ ದೂರ ಇಟ್ಟು ಜೆಡಿಎಸ್ ನೊಂದಿಗೆ ಕೈ ಜೋಡಿಸಬೇಡಿ ಎನ್ನುವ ವ್ಯಕ್ತಿ ಇದ್ದಾರೆ. ತನ್ವಿರ್ ಸೇಠ್ ಸ್ಥಳೀಯವಾಗಿ ಬಿಜೆಪಿಯನ್ನ ದೂರವಿಡಬೇಕು ಎಂದು ಹೊರಟವರು. ಆದ್ರೆ ಅವರಿಗೆ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ. ತನ್ವಿರ್ ಸೇಠ್ ಗೆ ರಾಜಕೀಯವಾಗಿ ಅನಾನುಕೂಲವಾಗಿ, ತಬ್ಬಲಿಯಾದಾಗ ಅವರಿಗೆ ಸಂಪೂರ್ಣವಾಗಿ ರಕ್ಷಣೆ ಕೊಡುತ್ತೇವೆ. ಈಗ ತನ್ವಿರ್ ಗೆ ಅದರ ಅವಶ್ಯಕತೆ ಇಲ್ಲ. ಅವರಿಗೆ ಅವರದ್ದೇ ಆದ ಶಕ್ತಿ ಇದೆ ಎಂದರು. ಅವರನ್ನ ಚುನಾವಣೆಯಲ್ಲಿ ಹಲವಾರು ಬಾರಿ ಸೋಲಿಸಬೇಕು ಎಂದು ನಾವು ಪ್ರಯತ್ನಪಟ್ಟಿದ್ದೇವೆ ಜೊತೆಗೆ ಬೇರೆಯವರು ಪ್ರಯತ್ನಪಟ್ಟಿದ್ದಾರೆ. ತನ್ವೀರ್ ಅವರದೇ ವ್ಯಕ್ತಿತ್ವದ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಟ್ಟಿದ್ದಾರೆ. ಒಂದು ವೇಳೆ ತನ್ವಿರ್ ಗೆ ಅನಾನುಕೂಲವಾದರೆ ಜೆಡಿಎಸ್ ಅವರ ಪರ ಇರಲಿದೆ ಎಂದು ಹೆಚ್.ಡಿಕೆ ತಿಳಿಸಿದರು. ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲ್ಲಿ… ಸದನದಲ್ಲಿ ಬಾರಿ ಗದ್ಧಲ ಉಂಟು ಮಾಡಿರುವ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮೊದಲು ಹಣದಿಂದ ಚುನಾವಣೆ ನಡೆಯೋದು ನಿಲ್ಲಲ್ಲಿ. ಚುನಾವಣೆಯ ವ್ಯವಸ್ಥೆಯ ಲೋಪ ಬದಲಾಗಲಿ. ಹಣವಿದ್ದವರಿಗೆ ಮಾತ್ರ ಚುನಾವಣೆ ಅನ್ನೋದು ನಿಲ್ಲಬೇಕು. ಆ ಮೇಲೆ ಈ ಬಗ್ಗೆ ಚರ್ಚೆ ಮಾಡೋಣ ಎಂದರು. ನನ್ನನ್ನು ಒಳಗೊಂಡಂತೆ ಬಿಜೆಪಿ, ಕಾಂಗ್ರೆಸ್ ಆತ್ಮ ವಿಮರ್ಶೆ ಮಾಡಬೇಕು. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದಲ್ಲಿ ಕಾಂಗ್ರೆಸ್ ‘ಯೂ ಟರ್ನ್’ ಹೊಡೆದಿದೆ. ಈ ವಿಚಾರದ ಚರ್ಚೆಯಲ್ಲಿ ಕಾಂಗ್ರೆಸ್ ಮೊದಲು ಭಾಗವಹಿಸಿತ್ತು. ಆ ನಂತರ ಸದನದಲ್ಲಿ ಯು ಟರ್ನ್ ಹೊಡೆಯಿತು. ಇದು ಯಾಕೆ ಅಂತ ಗೊತ್ತಾಗಲಿಲ್ಲ. ಪ್ರಸ್ತುತ ರಾಜಕಾರಣದ ಸ್ಥಿತಿ ಪ್ರಜಾಪ್ರಭುತ್ವದ ವ್ಯವಸ್ಥೆ ಬುಡಮೇಲು ಮಾಡಲಿದೆ. ಮೊದಲು ಅದು ಕೊನೆಯಾಗಬೇಕು ಎಂದು ಹೆಚ್.ಡಿಕೆ ತಿಳಿಸಿದರು. : - - – - . .