6 ತಿಂಗಳೊಳಗೆ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಮುಗಿಸದಿದ್ರೆ ಗುತ್ತಿಗೆದಾರರ ವಿರುದ್ದ ಕ್ರಮ- ಸಚಿವ ಡಾ. ನಾರಾಯಣಗೌಡ… ವಿಜಯಪುರ, ಮಾರ್ಚ್,1,2021(..):5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ 6 ತಿಂಗಳೊಳಗೆ ಮುಗಿಸಬೇಕು. ತಕ್ಷಣವೆ ಕಾಮಗಾರಿ ಪುನಾರಂಭಿಸಿ, ಕೆಲಸ ಮುಗಿಸಿ ಕೊಡಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಹೇಳಿದರು. ವಿಜಯಪುರ ನಗರದಲ್ಲಿರುವ ಸೈಕ್ಲಿಂಗ್ ವೆಲೊಡ್ರೊಮ್ ಕಾಮಗಾರಿ ಪರಿಶೀಲಿಸಿದ ಸಚಿವ ನಾರಾಯಣಗೌಡ, ಗುತ್ತಿಗದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆರು ತಿಂಗಳೊಳಗೆ ಸೈಕ್ಲಿಂಗ್ ವೆಲೆಡ್ರೊಮ್ ಸಿದ್ಧವಾಗಬೇಕು. ತಾಂತ್ರಿಕ ಸಮಸ್ಯೆ ಸರಿಪಡಿಸಿ, ನಿಯಮಾನುಸಾರ ಕಾಮಗಾರಿ ಮಾಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು. ಇದಕ್ಕು ಮುನ್ನ ಸಚಿವ ನಾರಾಯಣಗೌಡ ಸೈಕ್ಲಿಸ್ಟ್ ಗಳನ್ನು ಭೇಟಿ ಮಾಡಿದರು. ಇಲಾಖೆಯಿಂದ ನೀಡುತ್ತಿರುವ ಕ್ರೀಡಾ ಸೌಲಭ್ಯ ಸರಿಯಾಗಿ ತಲುಪುತ್ತಿದೆಯೆ ಎಂದು ಮಾಹಿತಿ ಪಡೆದರು. ಈ ವೇಳೆ ಕ್ರೀಡಾ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಇನ್ನೂ ಆರಂಭಿಸಿಲ್ಲದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೆ ಊಟ, ತಿಂಡಿ ವ್ಯವಸ್ಥೆ ಆರಂಭಿಸಿ, ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯಪುರ ಸೈಕ್ಲಿಂಗ್ ಗೆ ಅಂತಾರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಸೈಕ್ಲಿಂಗ್ ನಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಕ್ರೀಡಾ ಸೌಲಭ್ಯ ನೀಡಲು ನಾನು ಉತ್ಸುಕನಾಗಿದ್ದೇನೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಕ್ರೀಡಾ ಇಲಾಖೆ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. : - - –- 6 - – .