ರಾಮಮಂದಿರ ದೇಣಿಗೆ ಲೆಕ್ಕ ಕೇಳಿದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಟಾಂಗ್… ಮೈಸೂರು,ಫೆಬ್ರವರಿ,22,2021(..):ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಲಾಗುತ್ತಿರುವ ದೇಣಿಗೆ ಬಗ್ಗೆ ಲೆಕ್ಕ ಕೇಳಿದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ರಾಜ್ಯಕ್ಕೆ 2.86 ಲಕ್ಷ ಕೋಟಿ ಸಾಲದ ಹೊರೆ‌ ನೀಡಿದ ಲೆಕ್ಕ ಕೊಡಿ. ಆಮೇಲೆ ರಾಮಮಂದಿರಕ್ಕೆ ಕೇಳಿ ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯಗೆ ಮೈಸೂರು ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನೀವು ನಿಮ್ಮೂರಿನಲ್ಲಿ ರಾಮಮಂದಿರ ಕಟ್ಟುವ ಲೆಕ್ಕ ಕೊಡಿ ಅಂದ್ರೆ ಕೊಡೋಲ್ಲ. ಆದ್ರೆ ಅಯೋಧ್ಯೆ ರಾಮಮಂದಿರಕ್ಕೆ ಲೆಕ್ಕ ಮಾತ್ರ ಕೇಳ್ತಿರಾ.? ನೀವು ಬರುವ ಮುನ್ನ ರಾಜ್ಯದಲ್ಲಿ 1 ಲಕ್ಷ ಕೋಟಿ ಸಾಲ ಇತ್ತು. ಅದನ್ನ 2.86 ಲಕ್ಷ ಕೋಟಿಗೆ ಏರಿಕೆ ಮಾಡಿದ್ದು ಸಿದ್ದರಾಮಯ್ಯ. 1.86 ಲಕ್ಷ ಕೋಟಿ ಎಲ್ಲಿಗೆ ಹೋಯ್ತು,ಯಾವುದಕ್ಕೆ ದುರುಪಯೋಗ ಮಾಡಿದ್ರು ಅಂತ ಹೇಳಲಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರ ಹೆಸರಲ್ಲೆ ರಾಮನಿದ್ದಾನೆ. ಅವರ ಊರಿನಲ್ಲು ರಾಮಮಂದಿರ ಕಟ್ಟುತ್ತಿದ್ದಾರೆ‌. ಹಾಗಾಗಿ ಅವರು ಸಾಬರನ್ನ ಓಲೈಸೋದಕ್ಕೆ ಸುಮ್ಮನೆ ಹೇಳಿಕೆ‌ ಕೊಡ್ತಾರೆ. ಅವರ ಹೇಳಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು. : - - - – -