ಚಿತ್ರದುರ್ಗದಲ್ಲಿ ಭಾರಿ ಮಳೆಯಿಂದ ಹಾನಿ : 10 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿದ ರಘು ಆಚಾರ್… ಬೆಂಗಳೂರು,ಫೆಬ್ರವರಿ,19,2021(..): ಚಿತ್ರದುರ್ಗದಲ್ಲಿ ಕಳೆದ ರಾತ್ರಿ ಬಿದ್ದ ಭಾರೀ ಮಳೆಗೆ ದೊಡ್ಡಮಟ್ಟದಲ್ಲಿ ನಷ್ಟವುಂಟಾಗಿದ್ದು, ಪ್ರಕೃತಿ ವಿಕೋಪ ನಿಧಿಯಿಂದ ಕೂಡಲೇ ೧೦ ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ವಿಧಾನ ಪರಿಷತ್ ಸದಸ್ಯ ಜಿ. ರಘು ಆಚಾರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಗುರುವಾರ ರಾತ್ರಿ ಬಿದ್ದ ಜೋರು ಮಳೆಯಿಂದಾಗಿ ಕೆರೆ ಕೋಡಿ ಬಿದ್ದು ಮನೆಗಳಿಗೆ ನೀರು ತುಂಬಿದ್ದು, ಚರಂಡಿ ಗೋಡೆಗಳು ಕುಸಿದು ನೀರು ಮನೆಗಳಿಗೆ ನುಗ್ಗಿ ಜನಜೀವನ ದುಸ್ಥರಗೊಂಡಿದೆ ಎಂದು ಹೇಳಿದ್ದಾರೆ. ಮಲ್ಲಪುರಕೆರೆ ಹಾಗೂ ಸಜ್ಜನಕೆರೆ ಕೋಡಿ ಬಿದ್ದು ಹಲವು ಮನೆಗಳು ಕುಸಿದಿದ್ದು, 18ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಗೋಡೆಗಳು ಕುಸಿದಿವೆ. ಇನ್ನೂ ಚಿತ್ರದುರ್ಗ ಪಟ್ಟಣದ ಸ್ಟೇಡಿಯಂ ರಸ್ತೆ, ಕೆಳಗೋಟೆ, ಜಗಜೀವನರಾಮ್ ನಗರ, ಸಾದಿಕ್ ನಗರ, ಗುಮಾಸ್ತಕಾಲೋನಿಯಲ್ಲಿ ಮಳೆ ನೀರು ತುಂಬಿ ಜಲಾವೃತಗೊಂಡಿದ್ದು, ಚರಂಡಿಗಳ ಗೋಡೆಗಳು ಕುಸಿದಿವೆ ಎಂದು ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಸಭೆ ನಡೆಸಿ ಸ್ಥಳಕ್ಕೆ ಭೇಟಿ ನೀಡಿ ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿರುವುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಜಮೀನು ಹಾಗೂ ತೋಟಗಳಿಗೂ ಮಳೆ ನೀರು ನುಗ್ಗಿ ನೂರಾರು ಎಕರೆ ಬೆಳೆ ನಷ್ಟ ವಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಟ್ಟಾರೆ ತುರ್ತು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಕೂಡಲೇ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. : ----10 --- …