ನಗರ ಪ್ರದೇಶಗಳಲ್ಲಿ ‘ ಗೋಹತ್ಯೆ’ ಗೆ ಮೂಲವಾಗುತ್ತಿದೆ ಪ್ಲಾಸ್ಟಿಕ್‌ ತ್ಯಾಜ್ಯ.! ಮೈಸೂರು, ಜ.25, 2021 : (.. ) : ನಾಮಕವಾಸ್ತೆ ಮಾತ್ರ ಮೈಸೂರು ಪ್ಲಾಸ್ಟಿಕ್ ಮುಕ್ತ ನಗರ. ನಗರದ ಹಲವೆಡೆ ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್‌ ತ್ಯಾಜ್ಯ ನಿತ್ಯ ದರ್ಶನ. ಪರಿಣಾಮ ಜಾನುವಾರುಗಳ ಪ್ರಾಣಕ್ಕೆ ಇದು ತಂದೊಡ್ಡುತ್ತಿದೆ ಸಂಚಕಾರ. ತರಕಾರಿ ಅಥವಾ ಉಳಿಕೆ ಆಹಾರ ತುಂಬಿ ನಿತ್ಯ ಬಿಸಾಡುವ ಪ್ಲಾಸ್ಟಿಕ್‌ ಚೀಲಗಳು ಆಹಾರ ರೂಪದಲ್ಲಿ ಹಸು, ದನಕರುಗಳ ಉದರ ಸೇರುತ್ತಿದೆ. ‘ಪ್ಲಾಸ್ಟಿಕ್‌ ನಿಷೇಧ’ ಕಾನೂನು ಮೈಸೂರಲ್ಲಿ ಸಮರ್ಪಕವಾಗಿ ಜಾರಿಯಾಗದೆ ಕೇವಲ ಕಾಗದದಲ್ಲಿ ಮಾತ್ರ ಉಳಿದಿರುವುದೇ ಇದಕ್ಕೆ ಕಾರಣ. ಪಾಲಿಕೆ ಸಿಬ್ಬಂದಿ, ಪ್ರತಿದಿನ ಮನೆಗಳಿಂದ ಹಸಿ ಮತ್ತು ಒಣ ಕಸಗಳನ್ನು ಸಂಗ್ರಹಿಸುತ್ತಿರುವುದೇನೋ ನಿಜ. ಆದರೆ ಬೀದಿ ಬದಿಯ ತ್ಯಾಜ್ಯವನ್ನು ಸೂಕ್ತರೀತಿ ವಿಲೇವಾರಿ ಮಾಡದೆ ಇರುವುದು ಈಗ ಸಮಸ್ಯೆಗೆ ಮೂಲವಾಗಿದೆ. ಜತೆಗೆ ಬಿಡಾಡಿ ಜಾನುವಾರುಗಳ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡದಿರುವುದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ಇಂದಿಗೂ ಈ ಪ್ರಾಣಿಗಳ ಜೀವ ಹಿಂಡುತ್ತಿದೆ.( ಚಿತ್ರದಲ್ಲಿ ಕಾಣುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಹಾಗೂ ಅದನ್ಹು ಸೇವಿಸುತ್ತಿರುವ ಜಾನುವಾರುವಿನ ದೃಶ್ಯ, ದಟ್ಟಗಳ್ಳಿಯ ಕನಕದಾಸನಗರದ ಕೇರ್ಗಳ್ಳಿ ಮುಖ್ಯರಸ್ತೆ ಸಮೀಪದ ಮೈದಾನದದ್ದು ) ನಗರದ ಹಲವು ವಾರ್ಡ್‌ಗಳ ಕಸದ ರಾಶಿಯಲ್ಲಿ ಬಿಡಾಡಿ ಹಸು, ನಾಯಿಗಳು ಆಹಾರ ಹುಡುಕುವುದು ಸರ್ವೆ ಸಾಮಾನ್ಯ ಎಂಬಂತಾಗಿದೆ. ಪ್ಲಾಸ್ಟಿಕ್‌ ಚೀಲದಲ್ಲಿ ಗಂಟುಕಟ್ಟಿದ ಆಹಾರ ಸೇವಿಸಲು ಮುಂದಾಗುವ ದನ, ಕರುಗಳು ಚೀಲದ ಸಮೇತ ಆಹಾರ ತಿಂದು ಉದರ ಸಮಸ್ಯೆಗೆ ಮೂಲವಾಗುತ್ತಿವೆ. ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಸಿಕ್ಕಿ ಹಾಕಿಕೊಂಡು ಹೊಟ್ಟೆ ಊತ ಬಂದು, ಪ್ಲಾಸ್ಟಿಕ್‌ ತ್ಯಾಜ್ಯ ಜೀರ್ಣಗೊಳ್ಳದೆ ಹಸುಗಳ ಜೀವ ಕಂಟಕವಾಗಿ ಪರಿಣಮಿಸಿದೆ. ಸಾಕಿದ ಹಸುಗಳೇ ನಗರ ಪ್ರದೇಶಗಳಲ್ಲಿ ಆಹಾರ ಅರಸಿ ಹೆಚ್ಚುಹೆಚ್ಚಾಗಿ ಅಲೆಯುತ್ತಿವೆ. ಆಮೂಲಕ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಗ್ಗಿಲ್ಲದೆ ಸೇವಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ ಹಸುಗಳ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡಿ, ಮನೆಯ ಕೊಟ್ಟಿಗೆಗಳಲ್ಲೇ ಕಟ್ಟಿಹಾಕಿ, ಜವಾಬ್ದಾರಿಯುತವಾಗಿ ಮೇವು ನೀಡುವಂತೆ ತಾಕೀತು ಮಾಡಬೇಕು. ಈ ಆದೇಶವನ್ನು ಉಲ್ಲಂಘಿಸಿದರೆ ಹಸುಗಳನ್ನು ಗೋಶಾಲೆಗೆ ಸೇರಿಸಲು ಮುಂದಾಗಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. …. , . 25, 2021 (..): ‘- ’ . . . , . ‘ ’ . , . . .: / / : -------