ರಾಜ್ಯದ ಒಂದೇ ಒಂದು ಇಂಚು ಭೂಮಿಯೂ ಅನ್ಯರ ಪಾಲಾಗಲು ಸಾಧ್ಯವಿಲ್ಲ- ಉದ್ಧವ್ ಠಾಕ್ರೆ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ…. ಬೆಂಗಳೂರು,ಜನವರಿ,18,2021 (..):ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ಧಿದ್ದು, ಈ ನಡುವೆ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಅತಿರೇಖದ ಪರಮಾವಧಿ. ಉದ್ಧವ್ ವಿರಾಮದ ವೇಳೆಯಲ್ಲಿ ಇತಿಹಾಸವನ್ನೊಮ್ಮೆ ಕುಳಿತು ಓದಲಿ. ಅಂದು ಮಹಾಜನ್ ಆಯೋಗದ ರಚನೆಗೆ ಪಟ್ಟು ಹಿಡಿದಿದ್ದೇ ಮಹಾರಾಷ್ಟ್ರ. ತಾನೇ ಬಲವಂತ ಮಾಡಿ ರಚನೆಯಾದ ಆಯೋಗದ ವರದಿಯನ್ನು ಒಪ್ಪುವುದಿಲ್ಲ ಎಂದರೆ ಇಲ್ಯಾರು ಕೇಳಲು ಸಿದ್ದರಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ಕೀಟಲೆಗೆ ಅರ್ಥವಿದೆಯೆ…? ಕರ್ನಾಟಕ ಅಕ್ರಮಿತ ಪ್ರದೇಶ ಎಂಬ ಉದ್ಧವ್ ಹೇಳಿಕೆಯೇ ಅಸಂಬದ್ಧ. ಕರ್ನಾಟಕ ಯಾವ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ. 1956ರ ರಾಜ್ಯ ಪುನರ್ವಿಂಗಡನೆ ಸಂದರ್ಭದಲ್ಲಿ ಬೆಳಗಾವಿ ನ್ಯಾಯಬದ್ಧವಾಗಿಯೇ ಅಂದಿನ ಮೈಸೂರು ಸಂಸ್ಥಾನದ ಭಾಗವಾಗಿದೆ. ಮಹಾಜನ್ ಆಯೋಗದ ವರದಿಯೂ ಅದನ್ನು ಸ್ಪಷ್ಟಪಡಿಸಿದೆ. ಹೀಗಿರುವಾಗ ಮಹಾರಾಷ್ಟ್ರದ ಕೀಟಲೆಗೆ ಅರ್ಥವಿದೆಯೆ…? ಎಂದು ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸದ್ಯ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಒಂದು ರಾಜ್ಯದ ಮುಖ್ಯಮಂತ್ರಿಯಾದ ಉದ್ಧವ್ ಠಾಕ್ರೆಗೆ ಕೋರ್ಟ್‌ನಲ್ಲಿರುವ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂಬ ಕನಿಷ್ಟ ಜ್ಞಾನವೂ ಇಲ್ಲವೆ? ಉದ್ಧವ್ ರಾಜ್ಯದ ಭೂಮಿಯನ್ನು ವಶಪಡಿಸಿಕೊಳ್ಳುವುದು ಭ್ರಮೆ. ರಾಜ್ಯದ ಒಂದೇ ಒಂದು ಇಂಚು ಭೂಮಿಯೂ ಅನ್ಯರ ಪಾಲಾಗಲು ಸಾಧ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. : - - – - -