“ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ವಂಚನೆ, ಖತರ್ನಾಕ್ ಗ್ಯಾಂಗ್ ಬಂಧನ” ಮೈಸೂರು,ಜನವರಿ,15,2021(..): ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ನರಸಿಂಹರಾಜ ಮತ್ತು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ. ನರಸಿಂಹರಾಜ ಮತ್ತು ವಿ.ವಿ.ಪುರಂ ಪೊಲೀಸರು ಡಿಸಿಪಿ ಗೀತಾಪ್ರಸನ್ನ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ೭ ಜನ ಅಂತರಾರಾಜ್ಯ ವಂಚಕರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ೧೫ ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಗೋಲ್ಡ್ ಬಿಸ್ಕೆಟ್, ೨ ಕಾರು, ೧ ದ್ವಿಚಕ್ರ ವಾಹನ ಸೇರಿದಂತೆ ೫ ಮೊಬೈಲ್ ಫೋನ್ ಗಳ ವಶಪಡಿಸಿಕೊಳ್ಳಲಾಗಿದೆ. ಮುಸ್ತಫಾ ಅಲಿಯಾಸ್ ಯೂಸುಫ್ ಹಾಜಿ (೫೭), ಕುನ್ಹಿರಾಮನ್ ಅಲಿಯಾಸ್ ರಾಮ್ ಜಿ (೫೯), ಅಬ್ದುಲ್ ಹಕೀಂ ಅಲಿಯಾಸ್ ಮೊಹಮ್ಮದ್ (೪೪), ಮೊಹಮ್ಮದ್ ಶಾಫಿ (೪೨), ಗುರುಚರಣ್ ಬಿ.ಪಿ (೩೪), ಕಾರ್ತಿಕ್ ಕೆ.ಎ (೨೯), ಸಮೀವುಲ್ಲಾ ಅಲಿಯಾಸ್ ಸಮೀರ್ (೪೭) ಬಂಧಿತ ಆರೋಪಿಗಳಾಗಿದ್ದಾರೆ. ೨ ಪ್ರತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ವಂಚಕರಾಗಿದ್ದು, ಬಂಧಿತರ ಪೈಕಿ ಮೂವರು ಕೊಡಗು, ಓರ್ವ ಮೈಸೂರು, ಇನ್ನುಳಿದ ಮೂವರು ಕೇರಳ ರಾಜ್ಯದವರಾಗಿದ್ದಾರೆ. ಸಾರ್ವಜನಿಕರಿಗೆ ತಾವು ಚಿನ್ನದ ಮರ್ಚೆಂಟ್, ಆರ್.ಬಿ.ಐ ಡೀಲರ್ ಗಳೆಂದು ಪರಿಚಯಿಸಿಕೊಂಡು ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ. ನರಸಿಂಹರಾಜ ವಿಭಾಗ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಠಾಣೆ ಇನ್ಸ್‌ಪೆಕ್ಟರ್ ಅಜರುದ್ದೀನ್, ವಿ.ವಿ.ಪುರಂ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್, ಠಾಣೆ ಎಸ್ಐ ಪಾಪಣ್ಣ, ಸಿಬ್ಬಂದಿ ಮಂಜುನಾಥ್, ಪ್ರಸನ್ನ, ಮಹೇಶ್, ದೊಡ್ಡೇಗೌಡ, ರಮೇಶ್, ಸುನಿಲ್ ಕುಮಾರ್, ಈರೇಶ್, ಪರಶುರಾಮ ಸೇರಿದಂತೆ ಎರಡು ಠಾಣೆಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಲಾಗಿದೆ. : ------