ಕಾಗದ ಪತ್ರಗಳ ಸಮಿತಿ ಸಭೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ನಿಜಕ್ಕೂ ಆಹ್ವಾನ ಇರಲಿಲ್ಲವೇ..? ಮೈಸೂರು, ಜ.13, 2021,(.. ) ವಿಧಾನಸಭಾ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾ.ರಾ. ಮಹೇಶ್ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಭೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಆಹ್ವಾನ ಇರಲಿಲ್ಲವೇ..? ಎಂಬ ಜಿಜ್ಞಾಸೆ ಮೂಡಿದೆ. ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಸಭೆಯ ಆರಂಭದಲ್ಲಿ ಮಾತನಾಡಿ, ‘ವಿಧಾನ ಸಭೆಯ ಸ್ಪೀಕರ್ ಪರವಾಗಿ ಸಮಿತಿಯ ಸದಸ್ಯರು ಇಲ್ಲಿಗೆ ಬಂದಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ ಅಥವಾ ಪೊಲೀಸ್‌ ಆಯುಕ್ತರು ಸಮಿತಿಯ ಸದಸ್ಯರನ್ನು ಸ್ವಾಗತಿಸಬೇಕಿತ್ತು. ಆದರೆ ಇಲ್ಲಿ ಬರಮಾಡಿಕೊಳ್ಳಲು ಯಾರೂ ಇರಲಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿ ರೋಹಿಣಿ, ಸಿಂಧೂರಿ ಮಾಸ್ಕ್ ಧರಿಸಿಕೊಂಡೆ ಮಾತು ಶುರು ಮಾಡಿದರು. ಆಗ ಶಾಸಕರು ನಿಮ್ಮ ಮಾತು ಕೇಳ್ತಿಲ್ಲ ‘ಮಾಸ್ಕ್ ತೆಗೆದು ಮಾತಾಡಿ’ ಎಂದರು. ಅದಕ್ಕೆ ಜಿಲ್ಲಾಧಿಕಾರಿ, ಮಾಸ್ಕ್ ತೆಗೆಯಬಾರದು, ಮಾಸ್ಕ್ ತೆಗೆದು ನಾನು ಮಾತಾಡಲ್ಲ‌. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ನೀವೂ ಸಮ್ಮತಿಸಿದ್ದರೆ ನಾನು ಸಭೆಯಿಂದ ಹೋಗುತ್ತೇನೆ ಎಂದರು. ಆಗ ಶಾಸಕ ಸಾರಾ ಮಹೇಶ್, ನಿಮ್ಮನ್ನು ನಾವು ಸಭೆಗೆ ಆಹ್ವಾನಿಸಿರಲಿಲ್ಲ. ಆದರೂ ತಾವು ಬಂದಿದ್ದೀರಿ ಸಂತೋಷ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ‌ ನಿಮಗೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ.‌ ನಿಮಗೆ ಸಮಯ ಇದ್ದರೆ ಇರಿ, ಬೇರೆ ಕೆಲಸ ಇದ್ದರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದರು. ಆದರೆ, 06.01.2021 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬರೆದಿರುವ ಪತ್ರದಲ್ಲಿ, ‘ ಸಮಿತಿಯ ಮೈಸೂರು ಪ್ರವಾಸದ ವೇಳೆಯಲ್ಲಿ ಶಿಷ್ಟಾಚಾರದ ರೀತಿ ಸಮಿತಿಗೆ ಸಹಕರಿಸಲು ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂದು ಹಾಗೂ ಮೈಸೂರಿನಲ್ಲಿ ನಡೆಯುವ ಸಮಿತಿ ಸಭೆಗಳಲ್ಲಿ ತಾವು ಹಾಜರಾಗಬೇಕು…’ ಎಂಬ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಸಾ.ರ.ಮಹೇಶ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮನ್ನು ನಾವು ಸಭೆಗೆ ಆಹ್ವಾನಿಸಿರಲಿಲ್ಲ. ಆದರೂ ತಾವು ಬಂದಿದ್ದೀರಿ ಸಂತೋಷ ಎಂದದ್ದು ಜಿಜ್ಞಾಸೆಗೆ ಎಡೆಮಾಡಿದೆ. 00000 : --.--..--