ರೈತರ ಹೋರಾಟದ ಕುರಿತು ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಕುರುಬೂರು ಶಾಂತಕುಮಾರ್. ಮೈಸೂರು,ಜನವರಿ,12,2021(..): ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕುರುಬೂರ್ ಶಾಂತಕುಮಾರ್, ರೈತರ ಹೋರಾಟದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸ್ವಾಗತ. ಇದು ಜನತಂತ್ರ ವ್ಯವಸ್ಥೆಗೆ ಸಂದ ಗೌರವ ಎಂದಿದ್ದಾರೆ. ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಅನಗತ್ಯ ಕಾಯ್ದೆ ತಂದಿದೆ. ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ದೇಶಾದ್ಯಂತ ರೈತರು ಕೊರೆಯುವ ಚಳಿಯಲ್ಲಿ 48 ದಿನಗಳಿಂದ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ 74 ರೈತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇದನ್ನ ಪರಿಗಣಿಸಿ ಸರ್ವೋಚ್ಛ ನ್ಯಾಯಾಲಯ ಕಾಯ್ದೆಗಳಿಗೆ ತಡೆ ಹಾಕಿರುವುದು ಸಂತಸದ ವಿಚಾರ. ಇದು ರೈತರ ಹೋರಾಟದ ಮೊದಲ ಹಂತದ ಗೆಲುವು ಎಂದು ಹೇಳಿದ್ದಾರೆ. ಇನ್ನು ತಜ್ಞರ ಸಮಿತಿ ರಚನೆ ಮಾಡಿರುವುದು ರೈತ ಸಂಘಟನೆಗಳಿಗೆ ನಿರಾಸೆ ತಂದಿದೆ. ಸಮಿತಿ ರಚನೆ ಬಗ್ಗೆ ನ್ಯಾಯಾಧೀಶರು ಪುನರ್ ಪರಿಶೀಲನೆ ನಡೆಸಬೇಕು. ಈ ಸಮಿತಿಯಲ್ಲಿ ಸರ್ಕಾರದ ಕಾಯ್ದೆಗಳ ಬಗ್ಗೆ ಒಲವು ತೋರಿರುವ ಇಬ್ಬರು ಸದಸ್ಯರಿದ್ದಾರೆ. ಅವರ ವರದಿಗಳ ಬಗ್ಗೆ ದೇಶದ ರೈತರಿಗೆ ವಿಶ್ವಾಸವಿಲ್ಲ ಎಂದು ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. : - - - – -