ನರೇಂದ್ರ ಮೋದಿಯವರು ಒಂದು ದಿನವಾದರೂ ವಿಶ್ರಾಂತಿ ಪಡೆದಿರುವುದನ್ನು ಕೇಳಿದ್ದೀರಾ? : ಸಿಎಂ ಬಿ.ಎಸ್.ಯಡಿಯೂರಪ್ಪ ಮೈಸೂರು,ಜನವರಿ,11,2021(..) :ಜಗತ್ತಿನಲ್ಲಿ ಅಗ್ರಮಾನ್ಯ ನಾಯಕ ಎನಿಸಿಕೊಂಡಿರುವ ನರೇಂದ್ರ ಮೋದಿ ನಮಗೆ ಆದರ್ಶ. ದೇಶ- ವಿದೇಶ ಸುತ್ತಿದರೂ ಮೋದಿ ಒಂದು ದಿನವಾದರೂ ವಿಶ್ರಾಂತಿ ಪಡೆದಿರುವುದನ್ನು ಕೇಳಿದ್ದೀರಾ? ಪ್ರಧಾನಿಯೇ ಆ ಮಟ್ಟಿಗೆ ಕೆಲಸ ಮಾಡುತ್ತಿರಬೇಕಾದರೆ ನಾವು ಹೇಗಿರಬೇಕು ಅಂತ ಚಿಂತನೆ ಮಾಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಾನು ಪಟ್ಟಣ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದೆ. ಸಿಎಂ ಆಗುತ್ತೇನೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಷ್ಟು ಹೋರಾಟ ಮಾಡಿರಬಹುದು ಊಹೆ ಮಾಡಿಕೊಳ್ಳಿ. ಬಿಜೆಪಿ ನಗರ ಕೇಂದ್ರಿತ ಪಕ್ಷ ಅನ್ನಿಸಿಕೊಂಡಿತ್ತು. ಹಳ್ಳಿ ಹಳ್ಳಿ ಸುತ್ತಿದ್ದೇವೆ, ಗ್ರಾಮ ಗ್ರಾಮಕ್ಕೆ ಪ್ರವಾಸ ಮಾಡಿದ್ದೇನೆ ಎಂದು ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡರು. ಹುಚ್ಚನಂತೆ ಅಲೆದಿದ್ದೇನೆ. ಈಗ ಬಿಜೆಪಿ ರಾಜ್ಯದ ಎಲ್ಲ ಕಡೆಯೂ ಇದೆ. ರೈತ ಪರವಾದ, ಗ್ರಾಮೀಣ ಪ್ರದೇಶದಲ್ಲೂ ವರ್ಚಸ್ಸು ಇರುವ ಪಕ್ಷ ಅನ್ನಿಸಿಕೊಂಡಿದೆ ಎಂದರು. “ಗಾಂಧೀಜಿ ಅವರ ಕನಸು, ನನಸು ಮಾಡುವುದೆ ನಮ್ಮ ಗುರಿ” ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ಸ್ಥಾಪನೆ ಗಾಂಧೀಜಿ ಅವರ ಕನಸಾಗಿದ್ದು, ಅದನ್ನ ನನಸು ಮಾಡುವುದೆ ನಮ್ಮ ಗುರಿಯಾಗಿದೆ. ಗ್ರಾ.ಪಂ.ಚುನಾವಣೆಯಲ್ಲಿ ನಮ್ಮ ಸಾಧನೆ ಬಗ್ಗೆ ಹೈಕಮಾಂಡ್ ಸಂತೋಷವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಎಂದರು. ಪಕ್ಷ ತಳಮಟ್ಟದಿಂದ ಬಲವರ್ಧನೆಯಾಗಿದ್ದು, ಕರ್ನಾಟಕ ಬೇರೆ ರಾಜ್ಯಗಳಿಗೆ ಮಾರ್ಗದರ್ಶನ ನೀಡುವಂತಾಗಿದೆ. ಮಹಿಳೆಯರಿಗೆ ಮನೆಯಲ್ಲೆ ಗೌರವ ಸಿಕ್ತಾ ಇರಲಿಲ್ಲ. ಆದರೆ, ಗ್ರಾ.ಪಂ ಸದಸ್ಯರಾಗಿ ಈಗ ಹಳ್ಳಿಯ ಜವಬ್ದಾರಿಯೂ ಸಿಕ್ಕಿದೆ. ಇದು ನಿಮಗೆ ಸಿಕ್ಕಿರುವ ದೊಡ್ಡ ಅವಕಾಶ. ನಮಗೆ ನರೇಂದ್ರ ಮೋದಿ ಹಾಗೂ ನಳೀನ್ ಕುಮಾರ್ ಕಟೀಲ್ ಆದರ್ಶವಾಗಬೇಕು ಎಂದು ತಿಳಿಸಿದರು. : -- --- ..