ಇನ್ಮುಂದೆ ‘ಬಾಳೆ ನಗರಿ’ ಎಂದು ಪ್ರಸಿದ್ದಿಯಾಗಲಿರುವ ಸಾಂಸ್ಕೃತಿಕ ನಗರಿ ಮೈಸೂರು…. ಮೈಸೂರು,ಜನವರಿ,6,2021(..):ಸಾಂಸ್ಕೃತಿಕ ನಗರಿ, ಮಲ್ಲಿಗೆ ನಗರಿ ಎಂದು ಪ್ರಸಿದ್ಧವಾಗಿರುವ ಮೈಸೂರಿಗೆ ಇದೀಗ ಮತ್ತೊಂದು ಹೆಸರು ಸೇರ್ಪಡೆಯಾಗಲಿದೆ. ಹೌದು ಮೈಸೂರು ಇನ್ಮುಂದೆ ಬಾಳೆ ನಗರಿ ಎಂದು ಪ್ರಸಿದ್ದಿಯಾಗಲಿದೆ. ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ ಯೋಜನೆಗೆ ಮೈಸೂರು ಜಿಲ್ಲೆಯಿಂದ ಬಾಳೆ ಬೆಳೆ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಳೆ ಬೆಳೆಯನ್ನು ಉತ್ಪನ್ನ ಮಾಡುತ್ತಿರುವ ಹಿನ್ನೆಲೆ, ಜಿಲ್ಲೆಯಿಂದ ಬಾಳೆ ಬೆಳೆ ಆಯ್ಕೆ ಮಾಡಲಾಗಿದೆ. ಜಿಲ್ಲೆಯಿಂದ ಬಾಳೆ ಬೆಳೆ ಆಯ್ಕೆ ಬಗ್ಗೆ ಮೈಸೂರಿನ ಜಂಟಿ ಕೃಷಿ ನಿರ್ದೇಶಕ ಡಾ. ಎಂ ಮಹಾಂತೇಶಪ್ಪ ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಅಡಿಯಲ್ಲಿ ಬಾಳೆಬೆಳೆ ಆಯ್ಕೆಯಾಗಿದೆ. ಪ್ರತಿ ಜಿಲ್ಲೆಯ ಒಂದೊಂದು ಬೆಳೆಯನ್ನು ಆಯ್ಕೆ ಮಾಡಿ ಬಳಿಕ ಅಭಿವೃದ್ಧಿ ಪಡಿಸುವ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಬಾಳೆ ಬೆಳೆಯ ಮತ್ತಷ್ಟು ಅಭಿವೃದ್ಧಿ ಪಡಿಸುವ ಹಾಗೂ ಬಾಳೆ ಹಣ್ಣಿನಿಂದ ಇತರೆ ವಸ್ತುಗಳ ತಯಾರಿಸುವ ಗುರಿ ಹೊಂದಲಾಗಿದೆ. ಕಿರು ಉದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಆತ್ಮನಿರ್ಭರ ಯೋಜನೆಯಡಿ ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ ಯೋಜನೆ ಜಾರಿಗೆ ಬಂದಿದೆ. ಚಾಮರಾಜ ನಗರ ಜಿಲ್ಲೆ ಅರಿಶಿನ ಬೆಳೆ, ಮಂಡ್ಯ ಜಿಲ್ಲೆ ಬೆಲ್ಲ ಹಾಗೂ ಧಾರವಾಡ ಜಿಲ್ಲೆ ಮಾವು ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮೈಸೂರಿನ ಜಂಟಿ ಕೃಷಿ ನಿರ್ದೇಶಕ ಡಾ. ಎಂ ಮಹಾಂತೇಶಪ್ಪ ಮಾಹಿತಿ ನೀಡಿದರು. ಒಂದೇ ಸಮಯದಲ್ಲಿ ಎಲ್ಲರೂ ಜ್ಯೋತಿ ಭತ್ತವನ್ನೇ ಬೆಳೆಯುವುದರಿಂದ ಬೇಡಿಕೆ ಕುಂದಿದೆ… ಜ್ಯೋತಿ ಭತ್ತಕ್ಕೆ ಕಡಿಮೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಮಹಾಂತೇಶಪ್ಪ, ಸರ್ಕಾರದ ಹೊಸ ನೀತಿಯ ಜಾರಿ ಹಿನ್ನೆಲೆ ಎಂ.ಎಸ್.ಪಿ ದರದಲ್ಲಿ ಜ್ಯೋತಿ ಭತ್ತವನ್ನು ಖರೀದಿಸುವ ಹಾಗಿಲ್ಲ. ಎಂ.ಎಸ್.ಪಿ ಕಾಯ್ದೆಯ ಪ್ರಕಾರ ಜನರು ಹೆಚ್ಚು ಬಳಸುವ ವಸ್ತುಗಳನ್ನ ಮಾತ್ರ ಖರೀದಿಸಬೇಕಿದೆ. ಜ್ಯೋತಿ ಭತ್ತವನ್ನ ರಾಜ್ಯದಲ್ಲಿ ಕೇವಲ ಮಲೆನಾಡು ಭಾಗದಲ್ಲಿ ಮಾತ್ರ ಉಪಯೋಗಿಸುತ್ತಾರೆ. ಜ್ಯೋತಿ ಭತ್ತಕ್ಕೆ ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿಲ್ಲ ಎಂದರು. ನಮ್ಮ ಜಿಲ್ಲೆಯ ರೈತರಿಗೆ ಜ್ಯೋತಿ ಭತ್ತವನ್ನು ಹೆಚ್ಚು ಬೆಳೆಯಬೇಡಿ ಎಂದು ಹಿಂದಿನಿಂದಲೂ ತಿಳಿಸುತ್ತಿದ್ದೆವು. ಆದರೆ ಒಂದೇ ಸಮಯದಲ್ಲಿ ಎಲ್ಲರೂ ಜ್ಯೋತಿ ಭತ್ತವನ್ನೇ ಬೆಳೆಯುವುದರಿಂದ ಬೇಡಿಕೆ ಕುಂದಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಮಾತ್ರ ಜ್ಯೋತಿ ಭತ್ತ ಬಳಸುತ್ತಿದ್ದರು. ನಮ್ಮ ಭಾಗದ ಜ್ಯೋತಿ ಭತ್ತವನ್ನು ಕೇರಳ ರಾಜ್ಯದವರೇ ಹೆಚ್ಚು ಖರೀದಿಸುತ್ತಿದ್ದರು ಆದರೆ ಈಗ ಅವರು ಯಾವ ಕಾರಣಕ್ಕೆ ಖರೀದಿ ಕಡಿಮೆ ಮಾಡಿದ್ದಾರೆಂದು ತಿಳಿದುಬಂದಿಲ್ಲ. ಈ ಹಿನ್ನೆಲೆ ಜ್ಯೋತಿ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎಂ.ಮಹಾಂತೇಶಪ್ಪ ತಿಳಿಸಿದರು. : – – - —- –