ರಂಗಾಯಣ ಮುಂಭಾಗದ ರಸ್ತೆಗೆ ಪದ್ಮಶ್ರೀ ಬಿ.ವಿ ಕಾರಂತರ ಹೆಸರಿಡುವಂತೆ ಆಗ್ರಹಿಸಿ ಅಭಿಯಾನ…. ಮೈಸೂರು,ಡಿಸೆಂಬರ್ ,31,2020(..):ವಿನೋಬಾ ರಸ್ತೆಯಿಂದ ಕುಕ್ಕರಹಳ್ಳಿಗೆ ಹೋಗುವ ರಸ್ತೆಗೆ ಪದ್ಮಶ್ರೀ ಬಿ.ವಿ. ಕಾರಂತ ರಸ್ತೆ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಮೈಸೂರು ರಂಗಾಯಣ ವತಿಯಿಂದ ಅಭಿಯಾನ ನಡೆಯಿತು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ನೇತೃತ್ವದಲ್ಲಿ ರಸ್ತೆ ನಾಮಕರಣ ಅಭಿಯಾನ ನಡೆಯಿತು. ರಂಗಾಯಣದ ಗೇಟ್ ಮುಂಭಾಗ ನಿಂತು ರಂಗ ಗೀತೆಗಳನ್ನು ಹಾಡುವ ಮೂಲಕ ರಂಗಾಯಣದ ಕಲಾವಿದರು ಗಮನಸೆಳೆದರು. ಹಾಗೆಯೇ ಕಲಾಮಂದಿರ ಹಾಗೂ ರಂಗಾಯಣಕ್ಕೆ ಹೊಂದಿಕೊಂಡು, ಕುಕ್ಕರಹಳ್ಳಿ ರೈಲ್ವೆ ಗೇಟ್ ಕಡೆಗೆ ಸಾಗುವ ರಸ್ತೆಗೆ ಪದ್ಮಶ್ರೀ ಬಿ.ವಿ ಕಾರಂತರ ಹೆಸರಿಡುವಂತೆ ಆಗ್ರಹಿಸಿದರು. ಭಾರತೀಯ ರಂಗಭೂಮಿಗೆ, ಮೈಸೂರು ರಂಗಾಯಣಕ್ಕೆ ಬಿ.ವಿ.ಕಾರಂತರ ಕೊಡುಗೆ ಅನನ್ಯ. ಇವರ ಹೆಸರು ಚಿರಸ್ಥಾಯಿಯಾಗಿ ಇರುವಂತಾಗಲು ರಂಗಾಯಣ ಮುಂಭಾಗದ ರಸ್ತೆಗೆ ಬಿ.ವಿ ಕಾರಂತ ರಸ್ತೆ ಎಂದು ಮರುನಾಮಕರಣ ಮಾಡಬೇಕು ಎಂದು ಹಿರಿಯ ಹಾಗೂ ಕಿರಿಯ ರಂಗಾಯಣ ಕಲಾವಿದರೊಂದಿಗೆ ಸೇರಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಅಡ್ಡಂಡ ಸಿ. ಕಾರ್ಯಪ್ಪ ಮನವಿ ಸಲ್ಲಿಸಿದರು. ಅಲ್ಲದೆ ರಸ್ತೆಗೆ ಬಿ.ವಿ ಕಾರಂತರ ಹೆಸರಿಡದೇ ಹೋದರೆ ಮುಂದಿನ ದಿನಗಳಲ್ಲಿ ಗಾಂಧಿ ಮಾರ್ಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು. : - - - - -.