ನಕಲಿ ಫೇಸ್​ಬುಕ್ ಖಾತೆ ಸೃಷ್ಟಿ, ಹಣ ವಂಚನೆ : ಇಬ್ಬರು ಆರೋಪಿಗಳ ಬಂಧನ…! ಬೆಂಗಳೂರು,ಡಿಸೆಂಬರ್,27,2020(..) :ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಸಿಲಿಕಾನ್ ಸಿಟಿ ಪೋಲೀಸರು ಸೆರೆಹಿಡಿದಿದ್ದಾರೆ. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಚೌಕಿ ಬಂಗಾರ ಗ್ರಾಮದ ಇಬ್ರಾಹಿಂ ಹಾಗೂ ಮೊಹಮ್ಮದ್ ಶೋಕಿನ್ ಬಂಧಿತರಾಗಿದ್ದಾರೆ. ಕೇಂದ್ರ ವಿಭಾಗದ ಪೋಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಬಂಧಿತರಿಂದ ಐದು ಮೊಬೈಲ್, ಹತ್ತಕ್ಕೂ ಹೆಚ್ಚು ಸಿಮ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಬಿ.ಎಲ್‌.ಸಂತೋಷ್ ಹೆಸರಿನಲ್ಲಿ ನಕಲಿ‌ ಫೇಸ್​ಬುಕ್ ಖಾತೆ ತೆರೆದು ಅವರ ಪರಿಚಿತರು, ಸ್ನೇಹಿತರಿಗೆ ಮೆಸೆಂಜರ್ ಮೂಲಕ ಸಂದೇಶ ಕಳಿಸಿ 15 ಸಾವಿರ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು, ಇದನ್ನು ನಂಬಿದ ಸಂತೋಷ್ ಅವರ ಸ್ನೇಹಿತರು, ಪರಿಚಿತರು ಅವರು ನೀಡಿದ್ದ ಖಾತೆಗೆ ಆನ್​ಲೈನ್ ಮೂಲಕ ಹಣ ಸಂದಾಯ ಮಾಡುತ್ತಿದ್ದರು. ಈ ಕುರಿತಂತೆ ಸಂತೋಷ್ ಸಹ ತಮ್ಮ ಸಾಮಾಜಿಕ ತಾಣದಲ್ಲಿ ಎಚ್ಚರಿಕೆ ನೀಡಿದ್ದರು. ನಗರ ಕೇಂದ್ರ ವಲಯದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ನಂತರ ಪೊಲೀಸರು ಇದೀಗ ಇಬ್ಬರು ವಂಚಕರನ್ನು ಬಂಧಿಸಿದ್ದಾರೆ. ಇನ್ ಸ್ಪೆಕ್ಟರ್ ಪ್ರವೀನ್ ಬಾಬು ನೇತೃತ್ವದ ತಂಡ ಈ ಕಾರ್ಯಚರಣೆ ನಡೆಸಿದೆ. : ------- - …!