ಕೇಂದ್ರ ಸರ್ಕಾರ ಕೃಷಿ ಮಸೂದೆ ಕೈಬಿಡಬೇಕು- ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ಬೆಂಗಳೂರು,ಡಿಸೆಂಬರ್,26,2020(..):ಕೇಂದ್ರ ಸರ್ಕಾರ ಈ ಕೂಡಲೇ ಕೃಷಿ ಮಸೂದೆ ಜಾರಿ ಮಾಡುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು. ‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ ಎನ್ ನಾಗಮೋಹನ ದಾಸ್ , ಸಮೃದ್ಧಿಯ ಭಾಗವಾಗಿದ್ದ ರೈತರಿಗೆ ರಾಸಾಯನಿಕ ಬಳಸುವುದನ್ನು ಕಲಿಸಿದ, ಕಳಪೆ ಬೀಜಗಳನ್ನು ವಿತರಿಸಿದ ನಾವೇ ಅವರು ಆತ್ಮಹತ್ಯೆಗೆ ಇಳಿಯುವಂತೆ ಮಾಡಿದ್ದೇವೆ. ಈ ಪರಿಸ್ಥಿತಿಯನ್ನು ಅರಿತು ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ತಾನು ತರಲು ಉದ್ಧೇಶಿಸಿರುವ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದರು. ಈ ಹಿಂದಿನ ಎಷ್ಟೋ ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿದು ತಾವು ತರಲು ಮುಂದಾದ ಮಸೂದೆಗಳನ್ನು, ಯೋಜನೆಗಳನ್ನು ಕೈಬಿಟ್ಟಿವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದೆ ಇಡೀ ಭಾರತದ ನೊಂದ ರೈತರಿದ್ದಾರೆ. ಇದನ್ನು ಸರ್ಕಾರ ಅರಿಯಬೇಕು. ಇಂದು ಭೂಸುಧಾರಣೆ, ಅದಕ್ಕೆ ತರುತ್ತಿರುವ ತಿದ್ದುಪಡಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ಬೀಜ ಕಾಯಿದೆ ತಿದ್ದುಪಡಿ, ಎಲ್ಲವೂ ರೈತರನ್ನು ಗುಲಾಮಗಿರಿಯತ್ತ ತಳ್ಳುತ್ತಿದೆ ಎಂದು ವಿಷಾದಿಸಿದರು. ನ್ಯಾಯಾಂಗದ ತೀರ್ಪುಗಳ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು ನ್ಯಾಯಾಲಯದ ತೀರ್ಪುಗಳನ್ನು ವಿಮರ್ಶೆ ಮಾಡುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ಮಹತ್ವದ ಆಧಾರವಾದ ನ್ಯಾಯಾಂಗವನ್ನು ಮುನ್ನಡೆಸುವ, ಅದರ ಮಹತ್ವವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಇರುವ ವಿಮರ್ಶೆ ಸದಾ ಸ್ವಾಗತಾರ್ಹ. ತೀರ್ಪಿನ ವಿಮರ್ಶೆ ಮಾಡುವಾಗ ಅದು ರಚನಾತ್ಮಕವಾಗಿರಲಿ ಎಂದರು. ಇತ್ತೀಚೆಗೆ ನ್ಯಾಯಾಂಗ ನಿಂದನೆಯ ಕಾನೂನು ಜನರ ದನಿ ಹತ್ತಿಕ್ಕುವ ರೀತಿಯಲ್ಲಿಯೇ ಬಳಕೆಯಾಗುತ್ತಿದೆ. ಮೊದಲು ಕಾನೂನಿನ ಪುಸ್ತಕದಿಂದ ದೇಶದ್ರೋಹ, ಕ್ರಿಮಿನಲ್ ಕಂಟೆಂಪ್ಟ್ ಹಾಗೂ ನ್ಯಾಯಾಂಗ ನಿಂದನೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು. ‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಸಂವಾದ ನಡೆಸಿದರು. : –- – - – - .