ಆದಿಚುಂಚನಗಿರಿ ಶ್ರೀ ಮಠದಿಂದ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ- ಸಚಿವ ಎಸ್ ಟಿ ಸೋಮಶೇಖರ್… ಬೆಂಗಳೂರು,ಡಿಸೆಂಬರ್,23,2020(..):ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸ್ಲಂಗಳಿವೆಯೋ ಅಲ್ಲಲ್ಲಿ ಸ್ಲಂ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ಸಿಗಬೇಕಿದೆ. ಈ ಕೆಲಸವನ್ನು ಆದಿಚುಂಚನಗಿರಿ ಶ್ರೀಮಠದಿಂದ ಮಾಡಲಾಗುವುದು. ಸರ್ಕಾರದ ಕಡೆಯಿಂದ ಜಾಗವಿದ್ದರೆ ಸಾಕು ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದ್ದಾರೆ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು. ವಿಜಯನಗರದಲ್ಲಿರುವ ಶ್ರೀ ಕ್ಷೇತ್ರವಾದ ಆದಿಚುಂಚನಗಿರಿ ಮಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಬುಧವಾರ ಬೆಳಗ್ಗೆ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು, ಭಗವಂತನಾದ ಕಾಲಭೈರವನು ಜಗತ್ತಿಗೆ ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದ ಕಾಪಾಡಲಿ, ನಾಡಿನ ಸಮಸ್ತ ಜನತೆ ಸುಭೀಕ್ಷವಾಗಿರಲಿ, ಸಮಸ್ತರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಬೆಂಗಳೂರಿನ ಶ್ರೀ ಪೀಠದಲ್ಲಿದ್ದಾರೆಂದರೆ ಆಗಾಗ ಭೇಟಿ ಕೊಡುವ ಪರಿಪಾಠವನ್ನು ಹೊಂದಿದ್ದೇನೆ. ಇಂದು ಸಹ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು. ಕೊರೋನಾ ಎರಡನೇ ಅಲೆ ಬಗ್ಗೆ ಭಯ ಪಡಬೇಕಾದ ಅಗತ್ಯವಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸ್ ಬಳಕೆಮಾಡಬೇಕು. ಜೊತೆಗೆ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನು ನಾಲ್ಕೈದು ತಿಂಗಳು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಕರೆ ನೀಡಿದರು. 25 ರಂದು ರೈತ ದಿನಾಚರಣೆ ಡಿಸೆಂಬರ್ 25ರಂದು ವಾಜಪೇಯಿ ಅವರ ಹುಟ್ಟುಹಬ್ಬ. ಅಂದು ರೈತರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ. ಅಂದು 30 ಜಿಲ್ಲೆಗಳಲ್ಲೂ ಸುದ್ದಿಗೋಷ್ಠಿ ನಡೆಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಏನೆಲ್ಲ ಉಪಯೋಗವಾಗಲಿದೆ ಎಂಬ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು. ಇದು ಹೇಗೆ ರೈತರಿಗೆ ಉಪಕಾರಿ ಎನ್ನುವುದನ್ನು ಮನದಟ್ಟು ಮಾಡಲಾಗುವುದು ಎಂದು ತಿಳಿಸಿದರು. ಎಪಿಎಂಸಿ ಮುಚ್ಚಲ್ಲ ಎಪಿಎಂಸಿ ಮುಚ್ಚುವ ಪ್ರಶ್ನೆಯೇ ಇಲ್ಲ. ಯಾರಿಗೂ ಅದರಿಂದ ತೊಂದರೆಯಾಗದು. ಎಪಿಎಂಸಿಯನ್ನು ಇನ್ನೂ ಮೇಲ್ದರ್ಜೆಗೇರಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಇದಕ್ಕಾಗಿ ನಬಾರ್ಡ್ ನಿಂದ ಸಹ 205 ಕೋಟಿ ರೂಪಾಯಿ ಅನುದಾನ ನೀಡಿದೆ. ಅಲ್ಲದೆ, 35 ಪೈಸೆಗೆ ಇಳಿಸಿದ್ದ ಸೆಸ್ ಅನ್ನು ವರ್ತಕರು ಹಾಗೂ ಪ್ರತಿಪಕ್ಷಗಳ ಆಗ್ರಹದ ಮೇರೆಗೆ 1 ರೂಪಾಯಿಗೆ ಏರಿಸಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಆದಾಯದಲ್ಲಿ ನಷ್ಟ ಎಂಬ ಮಾತೂ ಇನ್ನು ಬಾರದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು. ಪ್ರಕರಣ ಕೋರ್ಟ್ ನಲ್ಲಿದೆ ಮೈಸೂರು ಡಿಸಿ ವರ್ಗಾವಣೆಗೆ ಸಂಬಂಧಿಸಿ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ಹಾಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ನಿಯಂತ್ರಣದಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ವರ್ಗಾವಣೆ ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಈ ಸಂದರ್ಭದಲ್ಲಿ ನಾನು ಏನನ್ನೂ ಹೇಳಲಾಗದು ಎಂದು ತಿಳಿಸಿದರು. ಎಲ್ಲರೂ ಸರ್ಕಾರದ ಆದೇಶ ಪಾಲಿಸಬೇಕು ಸಚಿವರ ಮಾತುಗಳನ್ನು ಜಿಲ್ಲಾಧಿಕಾರಿಗಳು ಕೇಳುತ್ತಿಲ್ಲ ಎಂಬ ಆರೋಪಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ಇಲ್ಲಿ ಸೋಮಶೇಖರ್ ಹೇಳುತ್ತಿದ್ದಾರೆ ಅಥವಾ ಇನ್ನಾವುದೇ ಸಚಿವರು ಹೇಳುತ್ತಿದ್ದಾರೆಂದರೆ ಅದು ವೈಯುಕ್ತಿಕ ಹೇಳಿಕೆಯಲ್ಲ. ಸರ್ಕಾರದ ಆದೇಶ. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು. : – - – - - .