ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡಿ- ಶಿಕ್ಷಕರ ಪ್ರತಿಭಟನೆಗೆ ಸಾಥ್ ನೀಡಿ ಬಿಜೆಪಿ ಎಂಎಲ್ ಸಿ ಪುಟ್ಟಣ್ಣ ಆಗ್ರಹ…. ಬೆಂಗಳೂರು,ಡಿಸೆಂಬರ್,16,2020(..):ವಿವಿಧ ಬೇಡಿಕೆ ಈಡೇರಿಸುವಂತೆ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಒಕ್ಕೂಟದ ವತಿಯಿಂದ ಖಾಸಗಿ ಶಾಲಾ ಶಿಕ್ಷಕರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಖಾಸಗಿ ಶಾಲಾ ಶಿಕ್ಷಕರ ಹೋರಾಟಕ್ಕೆ ಬಿಜೆಪಿ ಎಂಎಲ್ ಸಿ ಪುಟ್ಟಣ್ಣ ಸಾಥ್ ನೀಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಎಂಎಲ್ ಸಿ ಪುಟ್ಟಣ್ಣ, ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡಿ. ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್ ಗೆ ಅವಕಾಶ ನೀಡಿ. ಶಿಕ್ಷಕರು ಶಿಕ್ಷಕರೇತರರಿಗೆ ಫುಡ್ ಕಿಟ್ ನೀಡಿ. ಕೊರೋನಾ ವ್ಯಾಕ್ಸಿನ್ ಉಚಿತವಾಗಿ ನೀಡಬೇಕು. ಮಂತ್ರಿಗಳೇ ಅನುಕಂಪ ಸಾಕು ಪರಿಹಾರ ಬೇಕು ಎಂದು ಆಗ್ರಹಿಸಿದರು. ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ತಳ್ಳುಗಾಡಿಗಳಲ್ಲಿ ತರಕಾರಿಗಳನ್ನು ತಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಬೇಕು, ಶಿಕ್ಷಕರನ್ನು ಕೊರೊನಾ ಯೋಧರೆಂದು ಪರಿಗಣಿಸಬೇಕು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯ, ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿರುವ ಪೋಷಕರು ತಕ್ಷಣ ಬಾಕಿ ಶುಲ್ಕ ಪಾವತಿಗೆ ಆದೇಶ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ : – - - -– -