ಸಾರಿಗೆ ನೌಕರರ ಮುಷ್ಕರ: ಮೈಸೂರು ಗ್ರಾಮಾಂತರ, ನಗರ ಬಸ್ ವಿಭಾಗಕ್ಕೆ 3.20 ಕೋಟಿ ನಷ್ಟ… ಮೈಸೂರು,ಡಿಸೆಂಬರ್,15,2020(..):ಸರ್ಕಾರಿ ನೌಕರರನ್ನಾಗಿ ಮಾಡುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರು ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ಆದರೆ ಮುಷ್ಕರದಿಂದ ರಾಜ್ಯ ಸಾರಿಗೆಗೆ ಅಪಾರ ನಷ್ಟ ಉಂಟಾಗಿದೆ. ಮುಷ್ಕರದಿಂದಾಗಿ ಕಳೆದ ನಾಲ್ಕುದಿನಗಳಿಂದ ರಾಜ್ಯದಲ್ಲಿ ಬಸ್ ಸಂಚಾರ ಬಂದ್ ಆಗಿತ್ತು. ಇನ್ನು ಸಾರಿಗೆ ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸಲು ಸರ್ಕಾರ ಅಸ್ತು ಎಂದಿದ್ದು, ಈ ಮೂಲಕ ಸಾರಿಗೆ ನೌಕರರ ಹೋರಾಟಕ್ಕೆ ಜಯ ದೊರೆತಂತಾಗಿದೆ. ಈ ಮಧ್ಯೆ ನಾಲ್ಕು ಸಾರಿಗೆ ನಿಗಮಗಳಿಗೆ 58 ಕೋಟಿಯಷ್ಟು ನಷ್ಟ ಉಂಟಾಗಿದೆ. ಮೈಸೂರಿನ ಗ್ರಾಮಾಂತರ, ನಗರ ಬಸ್ ವಿಭಾಗಕ್ಕೆ ಅಂದಾಜು 3.20 ಕೋಟಿ ನಷ್ಟವಾಗಿದೆ. ಗ್ರಾಮಾಂತರ ವಿಭಾಗದಲ್ಲಿ 2.40 ಕೋಟಿ ರೂ. ಮತ್ತು ನಗರ ವಿಭಾಗದಲ್ಲಿ ಸುಮಾರು 80 ಲಕ್ಷ ರೂ. ಆದಾಯ ಖೋತಾ ಆಗಿದೆ. ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಬಸ್‌ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ನಿನ್ನೆ ಸರ್ಕಾರದಿಂದ ತಮ್ಮ ಬೇಡಿಕೆ ಈಡೇರಿಸುವ ಲಿಖಿತ ಭರವಸೆ ಪತ್ರ ಸಿಕ್ಕ ಬಳಿಕ ಮುಷ್ಕರ ಕೈಬಿಟ್ಟಿದ್ದರು. ನಂತರ ನಿನ್ನೆ ಸಂಜೆಯಿಂದಲೇ ರಾಜ್ಯಾದ್ಯಂತ ಎಂದಿನಂತೆ ಬಸ್ ಗಳು ರಸ್ತೆಗಿಳಿದವು. ಹೀಗೆ ಸಾರಿಗೆ ಮುಷ್ಕರ ಯಶಸ್ವಿಯಾದರೇ ನೌಕರರ ಹೋರಾಟದಿಂದ ಕೋಟ್ಯಾಂತರ ರೂ. ನಷ್ಟ ಉಂಟಾಯಿತು. : - -3.20 - – –