ಏಷಿಯನ್ ಪೈಂಟ್ಸ್ ಕಾರ್ಖಾನೆ ಹೋರಾಟ ಸಮಿತಿ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸಭೆ ವಿಫಲ: ರೈತರಿಂದ ಪ್ರತಿಭಟನೆ… ಮೈಸೂರು,ಡಿಸೆಂಬರ್,14,2020(..):ಏಷಿಯನ್ ಪೈಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ್ದ ರೈತರಿಗೆ ಕೆಲಸ ನೀಡುವ ವಿಚಾರವಾಗಿ ಕರೆಯಲಾಗಿದ್ದ ಸಂಧಾನ ಸಭೆ ವಿಫಲವಾಗಿದ್ದು ಈ ಹಿನ್ನೆಲೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಏಷಿಯನ್ ಪೈಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದ್ದ ರೈತರಿಗೆ ಕೆಲಸ ನೀಡುವ ವಿಚಾರವಾಗಿ ಏಷಿಯನ್ ಪೈಂಟ್ಸ್ ಕಾರ್ಖಾನೆ ಹೋರಾಟ ಸಮಿತಿ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತು. ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆ ನಿರ್ದೇಶಕರ ಕಛೇರಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಆದರೆ ಸಭೆ ವಿಫಲವಾಗಿದ್ದು ಈ ಬೆನ್ನಲ್ಲೆ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ರೈತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಅದೇ ಜಾಗದಲ್ಲಿ ಕೆಲಸ ನೀಡುವುದಾಗಿ ಏಷಿಯನ್ ಪೈಂಟ್ಸ್ ಕಾರ್ಖಾನೆ ಭರವಸೆ ನೀಡಿತ್ತು. ಆದರೆ ಇದೀಗ ಬೇರೆಡೆ ಘಟಕದಲ್ಲಿ ಕೆಲಸ ನೀಡುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಹೇಳುತ್ತಿದ್ದು ಇದಕ್ಕೆ ಒಪ್ಪದ ರೈತರು ಭೂಮಿ ನೀಡಿದ್ದ ಸ್ಥಳದಲ್ಲಿಯೇ ಕೆಲಸ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಇನ್ನು ರೈತ ಮುಖಂಡರ ನೇತೃತ್ವದಲ್ಲಿ ಕಳೆದ 21 ದಿನಗಳಿಂದಲೂ ರೈತರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು ರೈತರಿಗೆ ಕೆಲಸ ನೀಡುವ ವಿಚಾರವಾಗಿ ಇಂದು ಸಂಧಾನ ಸಭೆ ನಡೆಯಿತು. ಮೂರು ಸುತ್ತಿನ ಮಾತುಕತೆ ಬಳಿಕವೂ ಸಂಧಾನ ಸಭೆ ವಿಫಲವಾಗಿದ್ದು, ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೇಡಿಕೆ ಈಡೇರದಿದ್ದರೆ ಕಾರ್ಖಾನೆಗೆ ಬೀಗ ಜಡಿಯುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. : - – - –- - -.