ಮೈಸೂರಿನ ದೇವರಾಜ ಮಾರುಕಟ್ಟೆಗೆ ನುಗ್ಗಿದ ಪ್ರತಿಭಟನಾನಿರತ ರೈತರು: ಅಂಗಡಿ ಮುಂಗಟ್ಟು ಮುಚ್ಚಿಸಿ ಪ್ರತಿಭಟನೆ… ಮೈಸೂರು,ಡಿಸೆಂಬರ್,8,2020(..):ನೂತನ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಗೆ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ ರಸ್ತೆ, ದೊಡ್ಡಗಡಿಯಾರ, ಗಾಂಧಿವೃತ್ತದ ಮೂಲಕ ಸಯ್ಯಾಜಿ ರಾವ್ ರಸ್ತೆ ಮೂಲಕ ಮೆರವಣಿಗೆ ಸಾಗಿದ ರೈತರು, ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ನಗರದ ದೇವರಾಜ ಮಾರುಕಟ್ಟೆಗೆ ನುಗ್ಗಿದ ಪ್ರತಿಭಟನಾನಿರತ ರೈತರು ಅಂಗಡಿ ಮುಚ್ಚುವಂತೆ ವ್ಯಾಪಾರಸ್ಥರಿಗೆ ತಾಕೀತು ಮಾಡಿದರು. ಈ ಮೂಲಕ ಧರಣಿನಿರತ ರೈತರು ಮಾರುಕಟ್ಟೆಯಲ್ಲಿನ ಹಣ್ಣಿನ ಅಂಗಡಿ, ಹೂ ಅಂಗಡಿ ಹಾಗೂ ಮಾರುಕಟ್ಟೆಯ ಒಳಗಿನ ಅಂಗಡಿಗಳನ್ನು ಮುಚ್ಚಿಸಿ ಬಂದ್ ಗೆ ಬೆಂಬಲಿಸುವಂತೆ ಆಗ್ರಹಿಸಿದರು. ಬಳಿಕ ಚಿಕ್ಕಗಡಿಯಾರದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಹಾಡು ಹಾಡಿ ಆಕ್ರೋಶ ವ್ಯಕ್ತಪಡಿಸಿದರು. : - - –