ಸರ್ವಾಧಿಕಾರಿ ಜೋಡಿಗೆ ಸುಪ್ರೀಂ ಚಾಟಿ : ಎಚ್.ಎ.ವೆಂಕಟೇಶ್ ಮೈಸೂರು, ಏ.22, 2024 :(.. ) ಸಂವಿಧಾನ ದತ್ತವಾಗಿರುವ ಹಕ್ಕು ಅಧಿಕಾರಗಳನ್ನು ದಮನ ಮಾಡುವ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಗಿದ್ದ ಕೇಂದ್ರದ ಬಿಜೆಪಿ ಸರ್ಕಾರದ ಮೋದಿ ಮತ್ತು ಅಮಿತ್ ಶಾ ಅವರ ಜೋಡಿಗೆ ಸುಪ್ರೀಂ ಕೋರ್ಟ್ ಸರಿಯಾಗಿ ಚಾಟಿ ಬೀಸಿದೆ ಎಂದು ಕೆಪಿಸಿಸಿ ವಕ್ತಾರರಾದ ಎಚ್.ಎ.ವೆಂಕಟೇಶ್‌ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹೇಳಿದಿಷ್ಟು… ಬರ ಪರಿಸ್ಥಿತಿಯಿಂದ ಬಳಲುತ್ತಿರುವ ರಾಜ್ಯಕ್ಕೆ ಸುಮಾರು ೨೦ಸಾವಿರ ಕೋಟಿಗೂ ಅಧಿಕ ಹಕ್ಕಿನ ಪಾಲಿನ ಪರಿಹಾರದ ಹಣ ನೀಡದೇ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿತ್ತು. ಚರಿತ್ರೆಯಲ್ಲಿ ದಾಖಲಾಗುವಂತೆ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರೂ ಮೋದಿ ಮತ್ತು ಅಮಿತ್ ಶಾ ಜೋಡಿ ರಾಜ್ಯದ ಬೇಡಿಕೆ ನಿರ್ಲಕ್ಷಿಸುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರದ ಬಿಜೆಪಿ ಸರ್ಕಾರ ಮತದಾರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಬರ ಮತ್ತು ನೀರಿನ ಅಭಾವದಂತಹ ಪರಿಸರ ಕಾರಣದ ಅನಿರೀಕ್ಷಿತಗಳಿಗೂ ಅಸಹಕಾರ ತೋರುವುದು ಅಮಾನವೀಯ ನಡೆ. ರಾಜ್ಯ ಸರ್ಕಾರ ಪರಿಹಾರದ ಮನವಿ ಸಲ್ಲಿಸುವುದು ತಡವಾಗಿದೆ, ಅಷ್ಟರಲ್ಲಿ ಚುನಾವಣೆ ಬಂದಿದ್ದರಿಂದ ಪರಿಹಾರ ನೀಡಲಾಗಿಲ್ಲ ಎನ್ನುವ ಮೂಲಕ ಹತ್ತಾರು ಹಸಿಸುಳ್ಳುಗಳನ್ನು ಬಿತ್ತುತ್ತಾ ಅಮಿತ್ ಶಾ ತಮ್ಮ ನಿರ್ಲಕ್ಷ್ಯವನ್ನು ನಿರ್ಲಜ್ಜತೆಯಿಂದ ಸಮರ್ಥಿಸಿಕೊಳ್ಳಲೆತ್ನಿಸಿದ್ದರು. ಬಿಜೆಪಿ ಐಟಿ ಸೆಲ್ ಮತ್ತು ಇಲ್ಲಿನ ಬಾಲಂಗೋಚಿ ನಾಯಕರೂ ಸಹ ಇದೇ ಪುಂಗಿ ಊದಿ ಜನರ ಗಮನ ಬೇರೆಡೆ ಸೆಳೆಯಲೆತ್ನಿಸಿದ್ದರು. ಆದರೆ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿ ಕೇಂದ್ರಕ್ಕೆ ಚಾಟಿ ಬೀಸುವ ಮೂಲಕ ಸುಪ್ರೀಂ ಸಮರ್ಥ ನಿಲುವು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ನ್ಯಾಯಪೀಠಕ್ಕೆ ಗೌರವಾದರಗಳು ಸಲ್ಲಬೇಕು. ಕೇಂದ್ರದ ಸರ್ಕಾರವೊಂದು ಒಕ್ಕೂಟ ವ್ಯವಸ್ಥೆಯಲ್ಲಿ ತನ್ನ ರಾಜ್ಯಗಳನ್ನು ಜೊತೆಗೆ ಕೊಂಡೊಯ್ಯಬೇಕು. ಅದುಬಿಟ್ಟು ವಿಭಿನ್ನ ರಾಜಕೀಯ ನಿಲುವಿನ ಕಾರಣಕ್ಕೆ ನಿರ್ಲಕ್ಷಿಸುವುದು ಮತ್ತ ಸರ್ವಾಧಿಕಾರಿತನ ತೋರಿಸಿ ಅಧೀನವಾಗಿರುವಂತೆ ನಿರ್ದೇಶನ ನೀಡುವುದು ಒಪ್ಪಲಸಾಧ್ಯ. ಚುನಾವಣೆ ಸಮಯದಲ್ಲಿ ಸುಪ್ರೀಂ ಕೋರ್ಟ್‌ನಿಂದ ರಾಜ್ಯಕ್ಕೆ ಸಿಕ್ಕಿರುವ ಈ ಸಮರ್ಥನೆಯು ನಿಜವಾಗಿಯೂ ಬಿಜೆಪಿಯ ದಮನಕಾರಿ ಆಲೋಚನೆಗಳು, ಹಾಗು ಶೋಷಕ ಆಡಳಿತದ ಕಾರ್‍ಯವೈಖರಿಯನ್ನು ಬಿಚ್ಚಿಟ್ಟಿದೆ. ಮತದಾರರು ಇದನ್ನು ಅರಿಯಬೇಕು. ಒಕ್ಕೂಟ ವ್ಯವಸ್ಥೆಯ ಉಳಿವು, ಪ್ರಜಾಪ್ರಭುತ್ವದ ಆಚರಣೆ ಮತ್ತು ಸಮಪಾಲು- ಸಮಬಾಳಿನ ಆಶಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಬಿಜೆಪಿಯ ದುರಾಡಳಿತವನ್ನು ಕಿತ್ತೊಗೆಯಬೇಕಿದೆ ಎಂದಿದ್ದಾರೆ. : , , , : - . “ , ,” .