ಮಾಜಿ ಸಿಎಂ ಸಿದ್ದರಾಮಯ್ಯಗೆ ಗೌರವದ ಪಾಠ ಮಾಡಿದ ಹೆಚ್. ವಿಶ್ವನಾಥ್…. ಮೈಸೂರು,ಡಿಸೆಂಬರ್,4,2020(..): ಮಾಧ್ಯಮಗಳ ಜತೆ ಮಾತನಾಡುವ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಏಕವಚನ ಪ್ರಯೋಗಿಸುವ ಕುರಿತು ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿ ಗೌರವದ ಪಾಠ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್. ವಿಶ್ವನಾಥ್, ಸಿದ್ದರಾಮಯ್ಯನವರೇ ಮೊದಲು ನೀವು ಏಕವಚನದಲ್ಲಿ ಮಾತನಾಡುವುದನ್ನು ಬಿಡಿ. ನಾವೆಲ್ಲಾ ಒಟ್ಟಿಗೆ ವಕೀಲರಾಗಿದ್ದವರು. ಗೌರವ ನೀಡುವ ವಿಷಯದಲ್ಲಿ ದೇವರಾಜ ಅರಸುರನ್ನು ನೋಡಿ ಕಲಿಯಬೇಕು. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಎಲ್ಲರಿಗೂ ಸಮಾನವಾಗಿ ಗೌರವ ನೀಡುತ್ತಿದ್ದರು. ಅವರೇ ನಮಗೆಲ್ಲಾ ಮಾರ್ಗದರ್ಶಕರು ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು. ಅದು ಬ್ಲಾಕ್ ಮನಿಯೋ‌ ವೈಟ್‌ ಮನಿಯೋ? ಎಷ್ಟು ಕೋಟಿ‌ ಅಂತ ನೀವು ಬಹಿರಂಗ ಪಡಿಸಿ… ಹುಣಸೂರು ಉಪಚುನಾವಣೆ ವೇಳೆ ನೀಡಿದ್ದ ಹಣವನ್ನ ಸಿ.ಪಿ ಯೋಗೇಶ್ವರ್ ಮತ್ತು ಸಂತೋಷ್ ಲೂಟಿ ಮಾಡಿದ್ದಾರೆಂಬ ಹೆಚ್.ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಸಿದ್ಧರಾಮಯ್ಯ, ಆ ಹಣ ವೈಟ್ ಮನಿಯೋ ಬ್ಲಾಕ್ ಮನಿಯೋ ಯಾರು ಕೊಟ್ಟಿದ್ದು ಎಲ್ಲವೂ ತನಿಖೆಯಾಗಲಿ ಎಂದು ಹೇಳಿದ್ದರು. ಸಿದ್ಧರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಯೋಗೇಶ್ವರ್ ಹಣ ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದು ನಿಜ. ದೊಡ್ಡ ಮೊತ್ತ ಅಂದ್ರೆ 5 ಲಕ್ಷ ಹಣ. ನನ್ನ ಪಾಲಿಗೆ 5 ಲಕ್ಷ ದೊಡ್ಡ ಮೊತ್ತವೇ. ತೆರಿಗೆ ಲೆಕ್ಕದಲ್ಲು 5 ಲಕ್ಷ ದೊಡ್ಡ ಮೊತ್ತವೇ. ನೀವು ಸಿಎಂ ಆಗಿದ್ದವರು ಹಾಗಾಗಿ ನಿಮಗೆ ಕೋಟ್ಯಂತರ ರೂ ದೊಡ್ಡ ಮೊತ್ತ ಇರಬೇಕು. ನನಗೆ ಇದೆ ದೊಡ್ಡ‌ ಮೊತ್ತ ಎಂದು ತಿರುಗೇಟು ನೀಡಿದರು. ಆ ಹಣವನ್ನ ಯೋಗೇಶ್ವರ್ ಹಾಗೂ ಸಂತೋಷ್ ತೆಗೆದುಕೊಂಡು ಹೋದರೂ ಅಂತ ಹೇಳಿದ್ದೇನೆ. ನೀವು‌ ಜಿಟಿಡಿಗೆ ಹಣ ಕೊಟ್ಟಿದ್ದೇವೆ ಅಂದ್ರಲ್ಲ ಅದು ಯಾವ ಹಣ. ಅದು ಬ್ಲಾಕ್ ಮನಿಯೋ‌ ವೈಟ್‌ ಮನಿಯೋ? ಎಷ್ಟು ಕೋಟಿ‌ ಅಂತ ನೀವು ಬಹಿರಂಗ ಪಡಿಸಿ ಎಂದು ಸಿದ್ಧರಾಮಯ್ಯಗೆ ಸವಾಲು ಹಾಕಿದರು. : - – -- . ..