ನೇಹಾ ಹಿರೇಮಠರನ್ನು ಕೊಲೆ ಮಾಡಿದ ವಿಕೃತ ಪಾಪಿ ರಕ್ಷಣೆಗೆ ಕಾಣದ ಕೈಗಳು ಹೊಂಚು ಹಾಕುತ್ತಿವೆ- ಜೆಡಿಎಸ್ ಕಿಡಿ. ಬೆಂಗಳೂರು,ಏಪ್ರಿಲ್,19,2024 (..):ಹುಬ್ಬಳ್ಳಿಯಲ್ಲಿ ಕಾಲೇಜು ಆವರಣದಲ್ಲಿ ನೇಹಾ ಹೀರೆಮಠ ಅವರನ್ನ ಕೊಲೆ ಮಾಡಿದ ವಿಕೃತ ಪಾಪಿ ರಕ್ಷಣೆಗೆ ಕಾಣದ ಕೈಗಳು ಹೊಂಚು ಹಾಕುತ್ತಿವೆ ಎಂದು ಜೆಡಿಎಸ್ ಘಟಕ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ. ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆ. ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ತುಷ್ಟೀಕರಣವು ಅಪರಾಧ ಮನೋಭಾವದ ಕಿಡಿಗೇಡಿಗಳಿಗೆ ಅಫೀಮಿನಂತಾಗಿದೆ. ಕೆಲವರಿಗಂತೂ ಈ ನೆಲದ ಕಾನೂನು ಕಟ್ಟಳೆ ಅನ್ವಯ ಆಗುತ್ತಿಲ್ಲವೇನೋ ಎಂಬ ಅನುಮಾನವೂ ಕಾಡುತ್ತಿದೆ. ಈ ಸರಕಾರವೂ ಹಾಗೆಯೇ ವರ್ತಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಜೀವ ತೆಗೆದ ಪರಮ ಪಾಪಿಯನ್ನು ಸುಮ್ಮನೆ ಬಿಡಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು. ಆ ನತದೃಷ್ಟ ವಿದ್ಯಾರ್ಥಿನಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. : , ,