ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಸಚಿವ ಸುಧಾಕರ್ ಭೇಟಿ: ಡೀನ್ ಕಾರ್ಯವೈಖರಿಗೆ ಅಸಮಾಧಾನ… ಮೈಸೂರು,ನವೆಂಬರ್ 11,2020(..):ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೇ ವೇಳೆ ಕಾಲೇಜಿನ ಡೀನ್ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜಿನ ಆಡಳಿತ ಮುಖ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧೀಕ್ಷಕರ ಜೊತೆ ಸಚಿವ ಸುಧಾಕರ್ ಸಭೆ ನಡೆಸಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಕಾಲೇಜುಗಳ ನಡುವಿನ ವ್ಯತ್ಯಾಸ ತಿಳಿಸಿದ ಸುಧಾಕರ್, ಖಾಸಗಿ ಕಾಲೇಜುಗಳಲ್ಲಿ ಆಗುತ್ತಿರುವ ಶೇಕಡಾ 20 ರಷ್ಟು ಕೆಲಸವೂ ಇಲ್ಲಿ ಆಗುತ್ತಿಲ್ಲ. ಅಲ್ಲಿ ನಡೆಯುತ್ತಿರುವ ರಿಸರ್ಚ್ ಗಳು ಇಲ್ಲೇಕೆ ಆಗುತ್ತಿಲ್ಲವೆಂದು ಡೀನ್ ಡಾ. ಸಿ. ಪಿ. ನಂಜರಾಜ್ ಗೆ ಪ್ರಶ್ನೆ ಹಾಕಿದರು. ಹಾಗೆಯೇ ನಿಮ್ಮ ಧೋರಣೆ ಹಾಗೂ ಮನಃಸ್ಥಿತಿಯನ್ನು ಮೊದಲು ಬದಲಾಯಿಸಿಕೊಳ್ಳಿ ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು. ಇನ್ನು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ವೇಳೆ ಅನುದಾನದ ಖರ್ಚು ವೆಚ್ಚಗಳ ಬಳಕೆ ಕುರಿತು ಸಚಿವ ಸುಧಾಕರ್ ಮಾಹಿತಿ ಪಡೆದರು. ಈ ಸಮಯದಲ್ಲಿ ಮೆಡಿಕಲ್ ಕಾಲೇಜಿನ ಸೆಕ್ಯುರಿಟಿ ಸಿಬ್ಬಂದಿ ನಿಯೋಜನೆ ಕುರಿತು ಆಡಳಿತ ಮಂಡಳಿ ವಿರುದ್ಧ ಬಿಜೆಪಿ ಶಾಸಕ ಎಲ್.ನಾಗೇಂದ್ರ ಕಿಡಿ ಕಾರಿದರು. ಸೆಕ್ಯುರಿಟಿ ಕೆಲಸಕ್ಕೆ ನಿಮಗೆ ಇಷ್ಟ ಬಂದವರನ್ನು ನೇಮಿಸಿದ್ದೀರಿ. ವಯಸ್ಸಾದವರನ್ನೆಲ್ಲಾ ಸೆಕ್ಯುರಿಟಿ ಆಗಿ ನೇಮಿಸಿದ್ದೀರಿ. ಅವರಿಗೆ ಸೆಕ್ಯೂರಿಟಿ ಕೆಲಸ ಮಾಡುವ ಸಾಮರ್ಥ್ಯವೇ ಇರುವುದಿಲ್ಲ ಎಂದು ಶಾಸಕ ನಾಗೇಂದ್ರ ಗರಂ ಆದರು. ಇದೇ ವೇಳೆ ಶಾಸಕ ನಾಗೇಂದ್ರ ಮಾತಿಗೆ ಸಚಿವ ಸುಧಾಕರ್ ದನಿಗೂಡಿಸಿದರು. : –- - -.