ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಬಗ್ಗೆ ಗುಮಾನಿ ಇದೆ-ಸಂಸದ ಪ್ರತಾಪ್ ಸಿಂಹ… ಮೈಸೂರು,ನವೆಂಬರ್,10,2020(..):ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಬಗ್ಗೆ ಗುಮಾನಿ ಇದೆ. ನಮ್ಮ ಪಕ್ಷದ ಬಗ್ಗೆ ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಯಾವ ಮೂಲದಿಂದ ಇದು ಗೊತ್ತಾಗಿದೆ ಗೊತ್ತಿಲ್ಲ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕ ಸಾಧಿಸಿರಬಹುದು. ಕಾಂಗ್ರೆಸ್‌ ನಲ್ಲಿ ನನಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರಬಹುದು. ಇದರಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂದು ಲೇವಡಿ ಮಾಡಿದ್ದಾರೆ. ಜತೆಗೆ ಮುಂದಿನ ಎರಡುವರೇ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್ ಹಾಳಾದರೂ ಸರಿ ಡಿ ಕೆ ಶಿವಕುಮಾರ್‌ ಗೆ ಯಾವುದೇ ಸ್ಥಾನ ಸಿಗಬಾರದು. ಇದು ಸಿದ್ದರಾಮಯ್ಯ ಉದ್ದೇಶ ಅದೇ ಕಾರಣಕ್ಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಕಾಂಗ್ರೆಸ್ ಪರಂಪರೆ ಇದು ಸಿದ್ದರಾಮಯ್ಯಗೆ ಗೊತ್ತಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಇದನ್ನು ತಪ್ಪಿಸಲು ಡಿ ಕೆ ಶಿವಕುಮಾರ್‌ರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಆದರೆ ಪರಮೇಶ್ವರ ಅವರನ್ನು ಸೋಲಿಸಿದಂತೆ ಡಿಕೆಶಿ ಸೋಲಿಸಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹೀಗಾಗಿ ಪಕ್ಷದ ಹಿನ್ನೆಡೆಗೆ ಅವರೇ ಕಾರಣರಾಗುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೊಸಬಾಂಬ್ ಸಿಡಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉಪಚುನಾವಣೆಯಲ್ಲಿ ಮಾಡಿದ್ದೇನು..? ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು ಎರಡು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ದೊಡ್ಡ ಅಂತರದಲ್ಲಿ ಗೆಲ್ಲುತ್ತಿದ್ದೇವೆ. ಶಿರಾ ವಿಚಾರ 70 ವರ್ಷದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ಸಂಘಟಿತರಾಗಿ ಹೋರಾಟ ಮಾಡಿದಕ್ಕೆ ಗೆಲುವು ಸಿಗುತ್ತಿದೆ ಎಂದರು. ಉಪಚುನಾವಣೆ ಆಡಳಿತ ಪಕ್ಷದ ಪರವಾಗಿರುತ್ತವೆ. ಉಪಚುನಾವಣೆಯಲ್ಲಿ ಹಣ ಅಧಿಕಾರ ದುರುಪಯೋಗ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉಪಚುನಾವಣೆಯಲ್ಲಿ ಮಾಡಿದ್ದೇನು ?. ನಂಜನಗೂಡು ಚಾಮರಾಜನಗರ ಉಪಚುನಾವಣೆ ಹೇಗೆ ಗೆದ್ದರು ? ಉಪ ಚುನಾವಣೆ ಹೇಗೆ ಮಾಡಬೇಕು ಅಂತಾ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರೇ ಕಾಂಗ್ರೆಸ್‌ನವರು. ಉಪಚುನಾವಣೆಯಲ್ಲಿ ಎಲ್ಲಾ ಬಲಗಳು ಬಳಕೆಯಾಗುವುದು ಸಹಜ. ಕಾಂಗ್ರೆಸ್ ಸೋತಾಗ ಅವರಿಗೆ ಇವಿಎಂ ನೆನಪಾಗುತ್ತದೆ. ಅವರು ಗೆದ್ದ ಕಡೆ ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಇವಿಎಂ ವಿಚಾರದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಅಮೆರಿಕಾ ಚುನಾವಣೆಯಲ್ಲೂ ಇದು ಸಾಬೀತಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು. : - - –-- -