ಮಹರ್ಷಿ ವಾಲ್ಮೀಕಿಯವರ ಕೊಡುಗೆ ಸ್ಮರಿಸಿದ ಸಚಿವ ಎಸ್.ಟಿ ಸೋಮಶೇಖರ್… ಮೈಸೂರು,ಅಕ್ಟೋಬರ್ ,31,2020(..):ಮಹರ್ಷಿ ವಾಲ್ಮೀಕಿಯವರ ಕೊಡುಗೆ ಇಡೀ ವಿಶ್ವಕ್ಕೆ ದೊಡ್ಡ ಮಟ್ಟದ್ದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಕಾರಣ ವಾಲ್ಮೀಕಿ ವಿರಚಿತ ರಾಮಾಯಣ ಅದೆಷ್ಟೋ ಸಂದೇಶಗಳನ್ನು, ನೀತಿಪಾಠಗಳನ್ನು ನಮಗೆ ಹೇಳಿಕೊಟ್ಟಿದೆ. ನಮ್ಮ ಪ್ರತಿ ನಡೆಗೂ ಅದು ದಾರಿದೀಪವಾಗಿದೆ. ವಾಲ್ಮೀಕಿ ರಾಮಾಯಣವು ಯಾವುದೇ ಒಂದು ದೇಶಕ್ಕೆ ಸೀಮಿತವಾಗದೆ, ಜಾಗತಿಕವಾಗಿ ಮಾದರಿ ಕೃತಿಯಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಮರಿಸಿದರು. ಇಂದು ವಾಲ್ಮೀಕಿ ಜಯಂತಿ ಹಿನ್ನೆಲೆ ಮಹರ್ಷಿ ವಾಲ್ಮೀಕಿ ಅವರ ಕೊಡುಗೆ ಸ್ಮರಿಸಿದ ಸಚಿವ ಎಸ್.ಟಿ ಸೋಮಶೇಖರ್, ರಾಮನಂತಹ ಅಲೌಕಿಕ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸುವುದು ಸಾಮಾನ್ಯದ ಮಾತಲ್ಲ. ಅಂತಹ ವ್ಯಕ್ತಿ ಬಗ್ಗೆ ಬರೆಯಬೇಕಾದಲ್ಲಿ ವಾಲ್ಮೀಕಿ ಸಹ ಅಲೌಕಿಕ ವ್ಯಕ್ತಿತ್ವವನ್ನು ಹೊಂದಿರಲೇಬೇಕು. ಅಂತಹ ಸಿದ್ಧಿಪುರುಷರನ್ನು ಹೊಂದಿದ್ದ ನಾವೇ ಧನ್ಯರು. ಜಾತಿ ಜಾತಿಗಳ ನಡುವೆ ಬಂಧಗಳನ್ನು ಬೆಸೆಯುವಂತಹ ಅನೇಕ ನಿದರ್ಶನಗಳನ್ನು ನಾವು ರಾಮಾಯಣದಲ್ಲಿ ಕಾಣಬಹುದಾಗಿದೆ. ಇಂತಹ ಅನೇಕ ಚಿಕ್ಕ ಚಿಕ್ಕ ಪಾಠಗಳು ನನಗೆ ದೊಡ್ಡ ದೊಡ್ಡ ಮೌಲ್ಯಗಳನ್ನು ಹೇಳಿಕೊಟ್ಟಿವೆ. ಎಲ್ಲರೂ ಒಂದೇ, ಏಕತೆಯಿಂದಲೇ ಸಾರ್ವಭೌಮತೆ ಸೃಷ್ಟಿ ಎಂಬ ಸಂದೇಶವನ್ನು ಕೊಡುತ್ತವೆ ಎಂದು ನುಡಿದಿದ್ದಾರೆ. ಇಂತಹ ಮಹಾ ಕಾವ್ಯವನ್ನು ವಾಲ್ಮೀಕಿ ರಚಿಸಿದ್ದರೂ ಸಹ ಮಹರ್ಷಿಗಳ ಸಮುದಾಯದ ಮಂದಿಗೆ ಇಂದಿಗೂ ಸಮಾಜದಲ್ಲಿ ಅತ್ಯುತ್ತಮ ಸ್ಥಾನ ದೊರೆತಿಲ್ಲ ಎಂಬುದಂತೂ ಸತ್ಯ. ಅದು ಶೈಕ್ಷಣಿಕವಾಗಿರಲಿ ಅಥವಾ ರಾಜಕೀಯವಾಗಿರಲಿ ಎಲ್ಲ ದೃಷ್ಟಿಯಿಂದಲೂ ಎಲ್ಲ ಸಮುದಾಯದವರು ಮೇಲೆ ಬರುವುದು ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಮಹರ್ಷಿ ವಾಲ್ಮೀಕಿಗೆ ಗೌರವ ಸಮರ್ಪಿಸುವುದು ನಮ್ಮ ಕರ್ತವ್ಯ. ಹೀಗಾಗಿ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯ ಕೋರಿದ್ದಾರೆ. : – - - - - - .