ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಶ್ನಾತೀತರಾ….? ಮೈಸೂರು,ಅಕ್ಟೋಬರ್,21,2020(..): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮನ್ನು ತಾವು ಏನಂದುಕೊಂಡಿದ್ದಾರೋ ಗೊತ್ತಿಲ್ಲ. ತಾವು ಪ್ರಶ್ನಾತೀತ ಅಧಿಕಾರಿಣಿ ಅನ್ನೋ ಭ್ರಮೆಯಲ್ಲಿದ್ದಾರೋ ಗೊತ್ತಿಲ್ಲ. ಮೈಸೂರಿನ ಪ್ರಥಮ ಪ್ರಜೆ ಮೇಯರ್ ಗೆ ಅಗೌರವ ತೋರಿಸುತ್ತಿರುವುದು ಸರಿಯಲ್ಲ ಎಂದು ಪಾಲಿಕೆ ಸದಸ್ಯ ವಿ.ಲೋಕೇಶ್ ಪಿಯಾ ಕಿಡಿಕಾರಿದ್ದಾರೆ.ಮೇಯರ್ ಮೈಸೂರಿನ ಪ್ರಥಮ ಪ್ರಜೆ ಸ್ಥಾನವಾಗಿದೆ. ಅಂತಹ ಸ್ಥಾನಕ್ಕೆ ಅಗೌರವ ತೋರುವ ಮೂಲಕ ಜಿಲ್ಲಾಧಿಕಾರಿಗಳು ಇಡೀ ಮೈಸೂರಿನ ಜನರಿಗೆ ಅವಮಾನ ಮಾಡಿದ್ದಾರೆ. ದಸರಾ ಸಂದರ್ಭದಲ್ಲಿ ಯಾವುದೇ ಶಿಷ್ಟಾಚಾರ ಪಾಲಿಸದೇ ತಮಗೆ ಮನಬಂದಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಮೇಯರ್ ತಸ್ನೀಂ ದೂರಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ರೋಹಿಣಿ ಸಿಂಧೂರಿಯವರೇ ಕುದುರೆ ಸವಾರಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದಾರ? ದಸರಾ ಜಂಬೂ ಸವಾರಿ ವೇಳೆ ಮೇಯರ್ ಕುದುರೆ ಏರಿ ಹೋಗುವುದು ಸಂಪ್ರದಾಯ. ಮೇಯರ್ ಕುದುರೆ ಸವಾರಿ ಕೇವಲ ಮೇಯರ್ ಗೆ ಮಾತ್ರವಲ್ಲ ಮೈಸೂರಿನ ಜನರಿಗೆ ಸಲ್ಲಿಸುವ ಗೌರವ. ಆದರೆ, ಈ ಬಾರಿ ಸರಳ ದಸರಾ ಆಚರಣೆ ಹೆಸರಿನಲ್ಲಿ ಅದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬ್ರೇಕ್ ಹಾಕಿದ್ದಾರೆ. ಬಹುಶಃ ರೋಹಿಣಿ ಸಿಂಧೂರಿಯವರೇ ಕುದುರೆ ಸವಾರಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದಾರ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಡಿಸಿ ರೋಹಿಣಿ ಸಿಂಧೂರಿ ಮೇಯರ್ ಕ್ಷಮೆಯಾಚಿಸಬೇಕು ಈಗಾಗಲೇ, ದಸರಾ ಉದ್ಘಾಟನೆಗೆ ನಂದಿಧ್ವಜ ಸ್ಥಂಭದವರನ್ನು ಕರೆಯದೇ ಡಿಸಿ ಅವರು ಅವಮಾನ ಮಾಡಿದ್ದಾರೆ. ಈ ಕುರಿತು ವಿರೋಧವ್ಯಕ್ತವಾಗಿದೆ. ಮೇಯರ್ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕ್ಷಮೆಯಾಚಿಸಬೇಕು. ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಬೇಕು. ದಸರಾ ಮೆರವಣಿಗೆ ವೇಳೆ ಅರಮನೆಯ ಒಳಗಡೆ ಮೇಯರ್ ಕುದುರೆ ಸವಾರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಪಾಲಿಕೆ ಎಲ್ಲಾ ಸದಸ್ಯರು ಚರ್ಚಿಸಿ ದಸರಾವನ್ನು ಬಹಿಷ್ಕರಿಸುವ ತೀರ್ಮಾನ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ನಿಯಂತ್ರಣವಾಗಿದೆ ಎಂದು ಹೇಳುವವರಿಗೆ ಬುದ್ಧಿಭ್ರಮಣೆಯಾಗಿದೆ ಅಭಿರಾಂ ಜಿ.ಶಂಕರ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೊರೊನಾ ಸಂಬಂಧಿಸಿದಂತೆ ಜಿಲ್ಲೆಯು ಕೊರೊನಾ ಮುಕ್ತವಾಗಿ ರಾಜ್ಯಕ್ಕೆ, ದೇಶಕ್ಕೆ ಮಾದರಿಯಾಗಿತ್ತು. ಹೀಗಾಗಿಯೂ, ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ.ಶಂಕರ್ ಇದನ್ನು ಸಾಧನೆ ಎಂದು ಬಿಂಬಿಸಿಕೊಂಡಿರಲಿಲ್ಲ. ಆದರೆ, ಇಂದು ಪ್ರತಿದಿನ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿಯೂ, ನೂತನ ಜಿಲ್ಲಾಧಿಕಾರಿಗಳು ಬಂದ ಮೇಲೆ ಕೊರೊನಾ ನಿಯಂತ್ರಣವಾಗಿದೆ ಎಂದು ಹೇಳಲಾಗುತ್ತಿದ್ದು, ಹಾಗೇ ಹೇಳುವವರಿಗೆ ಬುದ್ಧಿಭ್ರಮಣೆಯಾಗಿರಬೇಕು ಎಂದು ಪ್ರಕಟಣೆಯ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ. : -- - ….?