‘ವಿದ್ಯಾಗಮ ಎಫೆಕ್ಟ್’: ಕೊರೋನಾಗೆ ಶಿಕ್ಷಕಿ ಮತ್ತು ಪತಿ ಬಲಿ : ಪುತ್ರನಿಗೆ ಉದ್ಯೋಗ, ಪರಿಹಾರದ ಭರವಸೆ ನೀಡಿದ ಸಚಿವ ಗೋಪಾಲಯ್ಯ.. ಹಾಸನ, ಅಕ್ಟೋಬರ್,10,2020(..):ವಿದ್ಯಾಗಮ ಯೋಜನೆ ಎಫೆಕ್ಟ್ ನಿಂದಾಗಿ ಹಾಸನದ ಶಿಕ್ಷಕಿ ಹಾಗೂ ಪತಿ ಕೊರೋನಾಗೆ ಬಲಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಸ್ವರ್ಣ(52) ಕೋವಿಡ್ ಪಾಸಿಟಿವ್ ನಿಂದ ಬಲಿಯಾಗಿರುವ ಶಿಕ್ಷಕಿ. ಸ್ವರ್ಣ ಅವರು ಕುದುರುಗುಂಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪ್ರಾಠಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ವಿದ್ಯಾಗಮ ಯೋಜನೆ ನಿಮಿತ್ತ ನಿತ್ಯ ಬಸ್ ನಲ್ಲಿ‌ ಓಡಾಟದಿಂದ ಶಿಕ್ಷಕಿ ಸ್ವರ್ಣ ಕೋವಿಡ್ ಸೋಂಕಿಗೆ ತುತ್ತಾಗಿ ಸೆಪ್ಟೆಂಬರ್ 26 ರಂದು ಮೃತಪಟ್ಟಿದ್ದರು. ಶಿಕ್ಷಕಿ ಸ್ವರ್ಣ ಅವರಿಂದ ಪತಿ ಮಂಜುನಾಥ್ (63) ಗೂ ಕೊರೋನಾ ಸೋಂಕು ತಗುಲಿ ಅವರೂ ಕೂಡ ಸಾವನ್ನಪ್ಪಿದ್ದರು. ಎರಡು ದಿನಗಳ ಅಂತರದಲ್ಲಿ ಶಿಕ್ಷಕಿ ಹಾಗೂ ಪತಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಹಾಸನದ ಸತ್ಯಮಂಗಲದಲ್ಲಿರುವ ಮೃತ ಶಿಕ್ಷಕಿ ಸ್ವರ್ಣ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಮೃತ ಶಿಕ್ಷಕಿ ಪುತ್ರನಿಗೆ ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಸವಲತ್ತು ನೀಡುವುದಾಗಿ ಸಚಿವ ಗೋಪಾಲಯ್ಯ ಭರವಸೆ ನೀಡಿದರು. ಈ ಸಂಬಂಧ ಸ್ಥಳದಲ್ಲೇ ಡಿಸಿ ಹಾಗು ಸಿಇಓ ಮತ್ತು ಡಿಡಿಪಿಇಗೆ ಸಚಿವ ಗೋಪಾಲಯ್ಯ ಸೂಚನೆ ನೀಡಿದರು. ಜತೆಗೆ ಸಿಎಂ ಜೊತೆ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಯತ್ನ ಮಾಡುವುದಾಗಿ ಭರವಸೆ ನೀಡಿದರು. : - - -- - –- - -