ಡಿ.ಕೆಶಿ ನಿವಾಸದ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ- ಮೈಸೂರಿನಲ್ಲಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ… ಮೈಸೂರು, ಅಕ್ಟೋಬರ್,5,2020(..):ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ. ಎಲ್ಲದಕ್ಕೂ ರಾಜಕೀಯ ಬೇರೆಸುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಸುಧಾಕರ್, ಚುನಾವಣೆಗೂ ಸಿಬಿಐಗೂ ಯಾವುದೇ ಸಂಬಂಧವಿಲ್ಲ. ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪದಲ್ಲಿ ಅರ್ಥವಿಲ್ಲ. ಸಿದ್ಧರಾಮಯ್ಯ ದೊಡ್ಡ ನಾಯಕ, ಡಿ.ಕೆ ಶಿವಕುಮಾರ್ ಅಲ್ಲ. ಹೀಗಾಗಿ ಟಾರ್ಗೆಟ್ ಮಾಡುವುದಾಗಿದ್ದರೇ ಸಿದ್ಧರಾಮಯ್ಯರನ್ನ ಟಾರ್ಗೆಟ್ ಮಾಡಬೇಕಾಗಿತ್ತು ಅಲ್ಲವೇ..? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಎರಡು ಬೈ ಎಲೆಕ್ಷನ್ ಇದೆ. ಒಂದು ವೇಳೆ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಸೋತರೂ ನಷ್ಟವಿಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತವಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪದಲ್ಲಿ ಅರ್ಥವಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಶಾ ಮೇಲೆ ದಾಳಿ ಮಾಡಿತ್ತು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಜೈಲಿಗೆ ಹಾಕಲಾಗಿತ್ತು. ಹಾಗಾದರೆ ಅದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿಯೇ ಮಾಡಿತು ಅಂದುಕೊಳ್ಳಬಹುದಾ ? ಎಂದು ಸುಧಾಕರ್ ಪ್ರಶ್ನಿಸಿದರು ಐಟಿ, ಇಡಿ, ಸಿಬಿಐ ಇವೆಲ್ಲವೂ ಸ್ವಾಯತ್ತ ಸಂಸ್ಥೆಗಳು. ಅವುಗಳನ್ನು ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡಿ. ಡಿಕೆಶಿ ಪ್ರಾಮಾಣಿಕರಾಗಿದ್ದರೆ ತನಿಖೆಯಿಂದ ಸಾಬೀತಾಗಲಿ. ಅದನ್ನು ಬಿಟ್ಟು ಎಲ್ಲದಕ್ಕೂ ರಾಜಕೀಯ ಬೆರಸುವುದು ಬೇಡ ಎಂದರು. : – - – - - .