ರೈತರ ಪಾಲಿನ ಕರಾಳ ಮಸೂದೆಗಳ ರದ್ದುಪಡಿಸುವಂತೆ ಆಗ್ರಹ: ‘ಕೈ’ ಮುಖಂಡರಿಂದ ಮನವಿ ಸಲ್ಲಿಕೆ ಮೈಸೂರು,ಅಕ್ಟೊಂಬರ್,03,2020(..): ರೈತರ ಪಾಲಿನ ಕರಾಳ ಮಸೂದೆಗಳನ್ನು ರದ್ದುಪಡಿಸುವಂತೆ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾಜಿ ಶಾಸಕ ವಾಸು ಮಾತನಾಡಿ, ಕೇಂದ್ರ ಸರಕಾರವು ದೇಶದ ರೈತರು ಮತ್ತು ಕೃಷಿ ವಿರುದ್ಧ ಕುಟಿಲ ಪಿತೂರಿಯನ್ನು ನಡೆಸುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ತರುವ ಮೂಲಕ ಹಸಿರು ಕ್ರಾಂತಿಯನ್ನು ಸೋಲಿಸಲು ಕೇಂದ್ರ ಬಿಜೆಪಿ ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದರು.ಬಂಡವಾಳಶಾಹಿಗಳು ನಿರ್ಮಿಸುವ ಬಲಿಪೀಠದ ಎದುರು ಅನ್ನದಾತ ರೈತರ ಮತ್ತು ಕೃಷಿಯನ್ನು ಬಲಿಕೊಡಲು ನಡೆಸುವ ಪೂರ್ವ ಯೋಜಿತ ಕೃತ್ಯವಾಗಿದೆ. ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಬಂಡವಾಳಶಾಹಿ ಗೆಳೆಯರಿಗೆ ಸೇವೆ ಸಲ್ಲಿಸಲು ಕಟಿಬದ್ಧರಾದ ಪ್ರಧಾನಿ ಮೋದಿಯವರು ರೈತರ ಸಂಕಷ್ಟಕ್ಕೆ ಕುರುಡರಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಅನ್ನದಾತ ರೈತ ಮತ್ತು ಕೃಷಿಕಾರ್ಮಿಕರು ಅನುಭವಿಸುತ್ತಿರುವ ಬವಣೆಗಳನ್ನು ಬಂಡವಾಳಶಾಹಿಗಳ ಅವಕಾಶವಾಗಿ ಪರಿವರ್ತಿಸಿದ ಮೋದಿ ಸರ್ಕಾರದ ಕೆಟ್ಟ ನಡೆಯನ್ನು ರೈತಾಪಿ ವರ್ಗ ಎಂದೂ ಮರೆಯುವುದಿಲ್ಲ, ಕ್ಷಮಿಸುವುದೂ ಇಲ್ಲ. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಈ ಮಸೂದೆಗಳನ್ನು ಹಿಂಪಡೆಯುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಚಂದ್ರಶೇಖರ್ ಇತರರು ಹಾಜರಿದ್ದರು. : ------’-