ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಅಲ್ಲ ರಾವಣ ರಾಜ್ಯವಿದೆ- ಯೋಗಿ ಸರ್ಕಾರದ ವಿರುದ್ಧ ಎಸ್.ಆರ್ ಪಾಟೀಲ್ ವಾಗ್ದಾಳಿ… ಬಾಗಲಕೋಟೆ,ಅಕ್ಟೋಬರ್,3,2020(..):ಹಾಡಹಗಲೇ ಅತ್ಯಾಚಾರವೆಸಗಿ ಬೆನ್ನುಮೂಳೆ ಮುರಿದು ನಾಲಿಗೆ ಸೀಳಿ ಕೊಲೆ ಮಾಡ್ತಾರೆ ಅಂದ್ರೆ ಅದು ರಾಮರಾಜ್ಯವಲ್ಲ. ರಾಮಮಂದಿರ ಕಟ್ಟಿ ರಾಮರಾಜ್ಯ ಮಾಡ್ತಾರೆ ಅಂದುಕೊಂಡಿದ್ವಿ. ಆದರೆ ಯೋಗಿ ಆದಿತ್ಯನಾಥ್ ರಾವಣ ರಾಜ್ಯ ಮಾಡಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷನಾಯಕ ಎಸ್.ಆರ್ ಪಾಟೀಲ್ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶ ಹತ್ರಾಸ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಅಲ್ಲ ರಾವಣ ರಾಜ್ಯವಿದೆ. ರಾಮ ಮಂದಿರ ಕಟ್ಟಿ ರಾಮರಾಜ್ಯ ಬರುತ್ತೆ ಎಂದು ನಾವು ತಿಳಿದಿದ್ದೆವು. ಆದರೆ ಯೋಗಿ ಆದಿತ್ಯನಾಥ್ ರಾವಣ ರಾಜ್ಯ ತಂದಿದ್ದಾರೆ. ಯೋಗಿ ಆದಿತ್ಯನಾಥ್ ಕಾವಿಧಾರಿಯಿದ್ದಾರೆ. ಯಾರು ತಪ್ಪಿತಸ್ಥರಿದ್ದಾರೆ ತಕ್ಷಣವೇ ಬಂಧಿಸಿ, ಶಿಕ್ಷೆಗೊಳಿಪಡಿಸಬೇಕಾಗಿತ್ತು. ಆದರೆ ಯೋಗಿ ಆದಿತ್ಯನಾಥ್ ಆರೋಪಿಗಳ ಪರ ನಿಂತಿದ್ದಾರೆ. ಪ್ರಕರಣವನ್ನ ಮುಚ್ಚಿಹಾಕಲು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಾಚಾವೋ ಬೇಟಿ ಪೇಡಾವೋ ಎನ್ನುತ್ತಾರೆ. ಈಗ ಬೇಟಿ ರಕ್ಷಣೆ ಎಲ್ಲಿದೆ ಎನ್ನುವುದನ್ನು ಮೋದಿ ತಿಳಿದುಕೊಳ್ಳಬೇಕು. ಉತ್ತರ ಪ್ರದೇಶ ಸರ್ಕಾರವನ್ನ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು. ಸರ್ಕಾರಗಳು ಎಲ್ಲಿಯವರೆಗೆ ಇರುತ್ತವೋ ಹೋಗುತ್ತವೋ ಯಾರಿಗೂ ಗೊತ್ತಿಲ್ಲ ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಸ್.ಆರ್ ಪಾಟೀಲ್, ಆನಂದ್ ಸಿಂಗ್ ಸಿಎಂ ಬಿಎಸ್ ವೈ ಸರ್ಕಾರದ ಕ್ಯಾಬಿನೆಟ್ ಸಚಿವರು ಅವರೇ ಹೇಳುತ್ತಿದ್ದಾರೆ. ವಿಪಕ್ಷದವರು ಹೇಳುತ್ತಲ್ಲ. ಮಂತ್ರಿಯೊಬ್ಬರು ಹೀಗೆ ಹೇಳುತ್ತಿದ್ದಾರೆ ಎಂದರೇ ಅದರಲ್ಲಿ ಸತ್ಯಾಂಶವಿದೆ ಎಂಬುದು ನನ್ನ ಅಭಿಪ್ರಾಯ ಎಂದರು. : - - - –- .