ಮೈಸೂರು ಮೃಗಾಯಲಕ್ಕೆ ನಟ ಶಿವರಾಜ್ ಕುಮಾರ್ ಭೇಟಿ: ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿ ಪಟ್ಟ ಹ್ಯಾಟ್ರಿಕ್ ಹೀರೋ ಮೈಸೂರು,ಅಕ್ಟೋಬರ್,1,2020(..):ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಕುಟುಂಬ ಸಮೇತ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಇಡೀ ಮೃಗಾಲಯ ಸುತ್ತಾಡಿ ಪ್ರಾಣಿಗಳ ಕಂಡು ಸಂತಸ ಪಟ್ಟರು. ಪತ್ನಿ ಇಬ್ಬರು ಮಕ್ಕಳು ಅಳಿಯನ ಜೊತೆ ಮೃಗಾಲಯಕ್ಕೆ ಭೇಟಿ ನೀಡಿದ ನಟ ಶಿವಣ್ಣ, ಇತ್ತೀಚೆಗೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿ ಪಟ್ಟರು. ಬಳಿಕ ನಟ ಶಿವಣ್ಣ ಅವರ ಕುಟುಂಬಸ್ಥರು ಮೃಗಾಲಯದ ಸುತ್ತಾ ಸುತ್ತಾಡಿ ಪ್ರಾಣಿಗಳನ್ನ ಕಂಡು ಸಂತಸಪಟ್ಟರು. ಈ ಮಧ್ಯೆ ಮೃಗಾಲಯದ ಬಗ್ಗೆ ನಟ ಶಿವರಾಜ್ ಕುಮಾರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ನಟ ಶಿವಣ್ಣ, ಮೃಗಾಲಯ ಅಂದ್ರೆ ನನಗೆ ತುಂಬಾ ಇಷ್ಟ. ಈ ವಯಸ್ಸಲ್ಲಿ ಇವನಿಗೇನು ಶೋಕಿ ಅಂದ್ರು ಪರವಾಗಿಲ್ಲ ಪ್ರಾಣಿಗಳನ್ನ ನೋಡೋದು ತುಂಬಾ ಇಷ್ಟ. ನಾನು ತುಂಬಾ ವರ್ಷಗಳ ನಂತರ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದೇನೆ. ಒಳ ಆವರಣದಲ್ಲಿ ಪ್ರಾಣಿಗಳನ್ನ ನೋಡ್ತೇವೆ ಅನ್ನೋದು ಬಿಟ್ರೆ ಕಾಡಿಗೆ ಬಂದ ಹಾಗೇ ಆಗುತ್ತೆ. ತುಂಬಾ ಚೆನ್ನಾಗಿ ಮೃಗಾಲಯ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ನಾನು ಪಾರ್ವತಿ ಎನ್ನುವ ಆನೆ ದತ್ತು ಪಡೆದಿದ್ದೇನೆ. ನನ್ನ ನೂರಾರು ಅಭಿಮಾನಿಗಳು ಸಹ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಭಿಮಾನಿಗಳು ನಮ್ಮನ್ನ ಫಾಲೋ ಮಾಡ್ತಾರೆ ಅನ್ನೋದಕ್ಕೆ ಇದೇ ಘಟನೆ ಸಾಕ್ಷಿ. ಹೀಗಾಗಿ ಮೃಗಾಲಯದ ಎಲ್ಲಾ ಸಿಬ್ಬಂದಿಗೂ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು. ಥಿಯೇಟರ್ ಓಪನ್ ಆಗಿರೋದು ತುಂಬಾ ಖುಷಿ ವಿಚಾರ ಸಿನಿಮಾ ಥಿಯೇಟರ್ ಓಪನ್ ಗೆ ಅನುಮತಿ ಸಿಕ್ಕ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ನಟ ಶಿವರಾಜ್ ಕುಮಾರ್, ಥಿಯೇಟರ್ ಓಪನ್ ಆಗಿರೋದು ತುಂಬಾ ಖುಷಿ ವಿಚಾರ. ಆದ್ರೆ ಎಷ್ಟು ಜನ ಬರಬೇಕು ಅಂತ ನಟನಾಗಿ ನಾನು ಏನು ಹೇಳೋಕಾಗೋಲ್ಲ. ನಟನಾಗಿ ನಾನು ಶೂಟಿಂಗ್ ಮಾಡಬಹುದು, ಆಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳೋಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ, ಅವರೇ ತೀರ್ಮಾನ ಮಾಡ್ತಾರೆ. ನಾನು ಪ್ರೇಕ್ಷಕರಿಗೆ ಸಿನಿಮಾ ನೋಡಲು ಬನ್ನಿ ಅಂತ ಕರೆಯುತ್ತೇನೆ. ಆದ್ರೆ ಯಾರಿಗು ಒತ್ತಾಯ ಮಾಡಿ ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಅಂತ ಹೇಳೋಲ್ಲ ಎಂದರು. ಸಿನಿಮಾ ಸಹ ಒಂದು ಉದ್ಯಮ. ಎಲ್ಲಾ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಬರಬೇಕು ಅಂತಾನು ನಾನು ಹೇಳೋಲ್ಲ. ಎಲ್ಲಾ ಸಿನಿಮಾಗಳು ಒಂದೇ. ಅದೊಂದು ಮ್ಯಾಜಿಕ್ ರೀತಿ ಇರುತ್ತೆ ಯಾವ ಸಿನಿಮಾ ಬೇಕಾದ್ರು ಗೆಲ್ಲಬಹುದು. ಆದ್ರೆ ಜನರು ತಮ್ಮ ಸುರಕ್ಷತೆ ನೋಡಿಕೊಂಡು ಥಿಯೇಟರ್ ಗೆ ಬರಲಿ. ಥಿಯೇಟರ್ ನಲ್ಲಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಲಿ. ಪ್ರೇಕ್ಷಕರ ಸುರಕ್ಷತೆ ನಮಗೆ ಬಹಳಾ ಮುಖ್ಯ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು. ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ ಲಾಕ್‍ಡೌನ್‍ನಿಂದ ಚಿತ್ರರಂಗಕ್ಕೆ ಸಂಕಷ್ಟ ಹಿನ್ನೆಲೆ, ಸಿಎಂ ಬಿಎಸ್ ಯಡಿಯೂರಪ್ಪ ಚಿತ್ರರಂಗಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಅವರ ಭರವಸೆಯ ನಿರೀಕ್ಷೆಯಲ್ಲೆ ಇದ್ಧೇವೆ. ನಮಗೆ ಅವರಿಂದ ಉತ್ತಮ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಸರ್ಕಾರಕ್ಕೆ ನಾವು ಒತ್ತಾಯ ಮಾಡಬಾರದು. ಅವರು ಸಹ ಕಷ್ಟದಲ್ಲಿದ್ದಾರೆ. ಸರ್ಕಾರ ಎಲ್ಲವನ್ನು ನಿಭಾಯಿಸಬೇಕು. ಹಾಗಾಗಿ ಅವರಿಗೂ ಸಮಯ ಬೇಕಾಗುತ್ತೆ. ಸಿಎಂ ಮಾತಿನ ಮೇಲೆ ಭರವಸೆ ಇದೆ. ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ ಎಂದು ನಟ ಶಿವರಾಜ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. : - - -