ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಬಹುಕೋಟಿ ಹಣ ದುರ್ಬಳಕೆ ಆರೋಪ: ದಾಖಲೆ ಬಿಡುಗಡೆ ಮಾಡಿದ ಶಾಸಕ ಸಾ.ರಾ ಮಹೇಶ್… ಮೈಸೂರು,ಅಕ್ಟೋಬರ್,1,2020(..):ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಬಹುಕೋಟಿ ಹಣ ದುರ್ಬಳಕೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಮಾಜಿ ಸಚಿವ ಹಾಗೂ ಶಾಸಕ ಸಾರಾ.ಮಹೇಶ್ ಈ ಗಂಭೀರ ಆರೋಪ ಮಾಡಿದ್ದಾರೆ. ಹೌದು, ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾ.ರಾ ಮಹೇಶ್ ಅವರು, ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಹುಕೋಟಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿದ್ದಾರೆ. ನಂತರ ಮಾತನಾಡಿದ ಶಾಸಕ ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗುವುದಕ್ಕೂ ಮುಂಚೆ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದರು. ಆಂಧ್ರಪ್ರದೇಶದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ, ಮೂಲಸೌಕರ್ಯ ಕಲ್ಪಿಸುವುದು ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಆಧಾರದ ಮೇಲೆ 2020ರ ಜೂನ್ 30ರಂದು ಸರ್ಕಾರ ಆದೇಶ ಮಾಡಿದೆ. 200 ಕೋಟಿ ರೂ. ಕಾಮಗಾರಿಯ ನಿರ್ಮಾಣ, ನಿರ್ವಹಣೆಯನ್ನು ಟಿಟಿಡಿಗೆ ವಹಿಸಿದೆ. ಆರ್ಕಿಟೆಕ್ಚರ್, ಲ್ಯಾಂಡ್‌ ಸ್ಕೇಪಿಂಗ್ ಮತ್ತು ಇಂಟೀರಿಯರ್ ವಿನ್ಯಾಸದ ಕೆಲಸವನ್ನು ಮೆ.ಗಾಯತ್ರಿ ಆ್ಯಂಡ್ ನಮಿತ್ ಆರ್ಕಿಟೆಕ್ಟ್ಸ್ ಅವರಿಗೆ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999ರಡಿ ವಿನಾಯಿತಿ ಕೂಡ ನೀಡಲಾಗಿದೆ. ಅಂದ್ರೆ 10 ಕೋಟಿ ರೂ. ನೀಡಲಾಗಿದೆ. ಹಾಗಾದರೇ ನಮ್ಮಲ್ಲಿ, ನಮ್ಮ ಸರ್ಕಾರದಲ್ಲಿ ಆರ್ಕಿಟೆಕ್ಟ್, ವಿನ್ಯಾಸಗಾರರೇ ಇಲ್ಲವೇ ? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಭೂಮಿ‌ ನಮ್ಮದು, ಹಣ ನಮ್ಮದು, ಆದರೆ ಕಾಮಗಾರಿ ರಾಜ್ಯದ ಸಂಸ್ಥೆಗೆ ಯಾಕೆ…? ಎಂದು ಪ್ರಶ್ನಿಸಿರುವ ಸಾ.ರಾ ಮಹೇಶ್, ನಮ್ಮ ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿರಲಿಲ್ವ. ನಮ್ಮಲ್ಲಿ ಆರ್ಕಿಟೆಕ್ಟ್‌ಗಳು ಇರಲಿಲ್ವ. ಇದು ಬಿಕ್ಷುಕರು ನೀಡಿರುವ ಹಣ. ನಮ್ಮ ರಾಜ್ಯದಲ್ಲೇ ಸಾಕಷ್ಟು ಸ್ಮಾರಕಗಳನ್ನು ಈಗಲೂ‌ ಗುರುತಿಸಲು ಆಗಿಲ್ಲ. ಈಗಿರುವಾಗ ಕೇವಲ ಒಂದೇ ಜಾಗಕ್ಕೆ ಇಷ್ಟು ಹಣ ಕೊಟ್ಟಿದ್ದು ಯಾಕೆ ಎಂದು ಕಿಡಿಕಾರಿದ್ದಾರೆ. ಈ ವಿಚಾರವನ್ನು ಕೆಲವರು ಗಿಫ್ಟ್ ಅಂತ ಹೇಳುತ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಶಾಸಕ ಸಾರಾ ಮಹೇಶ್ ಒತ್ತಾಯಿಸಿದ್ದಾರೆ. : - – - – -