ಹೂ ಗಿಡ ನೆಡುವ ಮೂಲಕ ಉದ್ಯಾನವನ ಉದ್ಘಾಟಿಸಿದ ಮೈಸೂರು ಪಾಲಿಕೆ ಮೇಯರ್ ತಸ್ನೀಂ ಮೈಸೂರು,ಸೆಪ್ಟಂಬರ್,19,2020(..): ಮೈಸೂರಿನ ವೆದಾಂತ ಹೆಮ್ಮಿಗೆ ವೃತ್ತದಲ್ಲಿನ ಎರಡು ಉದ್ಯಾನವನಗಳನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಬಾನು ಹಾಗೂ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ಅಲಮಂಡ ಹೂಗಿಡ ನೆಡುವ ಮೂಲಕ ಉದ್ಘಾಟಿಸಿದರು. ಸಂತಸ ಐವಿಎಫ್ ಸಂಸ್ಥೆಯು ಮೈಸೂರು ಮಹಾನಗರ ಪಾಲಿಕೆ ಜತೆ ಕೈ ಜೋಡಿಸಿ ನಗರದ ಲಕ್ಷ್ಮೀಪುರಂ ನಲ್ಲಿರುವ ವೆದಾಂತ ಹೆಮ್ಮಿಗೆ ವೃತ್ತದಲ್ಲಿನ ಉದ್ಯಾನವನದ ಜೀರ್ಣೋದ್ಧಾರ, ಕಾಂಪೌಂಡ್ ಮತ್ತು ಬೇಲಿಯ ರಿಪೇರಿ ಕಾರ್ಯ ಮಾಡಿದ್ದು, ಇದೀಗ ಉದ್ಯಾನವನ ಸುಂದರ ಹೂಗಿಡ ಹಸಿರು ಹುಲ್ಲು ಹಾಸಿನೊಂದಿಗೆ ದಾರಿಹೋಕರನ್ನ ಕೈ ಬೀಸಿ ಕರೆಯುವಂತಿದೆ. ಈ ಮೂಲಕ ಸಂತಸ ಐವಿಎಫ್ ಸಂಸ್ಥೆಯು ಮೈಸೂರು ನಗರ ಸ್ವಚ್ಛತೆ ಮತ್ತು ಹಸಿರಾಗಿಸಲು ಯತ್ನಿಸುತ್ತಿದೆ. ಇನ್ನು ಉದ್ಯಾನವನಗಳ ಉದ್ಘಾಟನೆ ಬಳಿಕ ಮಾತನಾಡಿದ ಐವಿಎಫ್ ಸಂಸ್ಥೆಯ ನಿರ್ದೇಶಕರಾದ ಡಾ.ಸೌಮ್ಯ ದಿನೇಶ್, ಮಕ್ಕಳಿಲ್ಲದ ದಂಪತಿಗಳ ಬಾಳಿನಲ್ಲಿ ಮಂದಹಾಸ ಮೂಡಿಸಲು ಶ್ರಮಿಸುತ್ತಿರುವ ಐವಿಎಫ್ ಸಂಸ್ಥೆಯು ನಗರವನ್ನು ಹಸಿರಾಗಿಸುವುದು ನಮಗೆ ಒಂದು ಆಯ್ಕೆಯಾಗಿಲ್ಲದೇ ಆನಂದ ನೀಡುವ ಜವಾಬ್ದಾರಿಯಾಗಿದೆ ಎಂದು ನಂಬಿದ್ದೇವೆ. ಹಾಗೂ ನಮ್ಮ ಈ ಕೆಲಸವು ಇನ್ನೂ ಆನೇಕ ಖಾಸಗಿ ಸಂಸ್ಥೆಗಳಿಗೆ ಸ್ಪೂರ್ತಿಯಾಗಿ ಅವರೂ ಸಹ ಮೈಸೂರನ್ನ ಸುಂದರಗೊಳಿಸಲು ಬದ್ಧರಾಗಿರುತ್ತಾರೆಂದು ಆಶಿಸಿತ್ತೇನೆ ಎಂದರು. ಈ ವೇಳೆ ಆರೋಗ್ಯಾಧಿಕಾರಿ ನಾಗರಾಜ್, ಕಾರ್ಪೋರೇಟರ್ ಸೌಮ್ಯ ಉಮೇಶ್ ಕುಮಾರ್, ಡಾ. ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು. : - – – -- -