ರಾತ್ರಿ ವೇಳೆ ವಾಹನಗಳನ್ನ ಹೊರಗಡೆ ನಿಲ್ಲಿಸುವ ಮಾಲೀಕರೇ ಎಚ್ಚರ….! ಮೈಸೂರು,ಸೆಪ್ಟಂಬರ್,10,2020(..):ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆಗಳ್ಳರು ಸರಗಳ್ಳರ ಜತೆ ಇದೀಗ ವಾಹನಗಳ ಚಕ್ರವನ್ನು ಕದಿಯುವ ಕಳ್ಳರೂ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಹೌದು, ನಗರದ ಹೆಬ್ಬಾಳ ಬಳಿ ಮನೆಯ ಹೊರಗಡೆ ನಿಲ್ಲಿಸಿದ್ದ ಗೂಡ್ಸ್ ಆಟೋದ ಹಿಂಬದಿಯ ಎರಡು ಚಕ್ರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಹಾಗೆಯೇ ಮತ್ತೊಂದು ಗೂಡ್ಸ್ ಆಟೋ ಸ್ಟೆಪ್ನಿಯನ್ನೇ ಕಳ್ಳರು ಕಳ್ಳತನ ಮಾಡಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಈ ಘಟನೆ ನಡೆದಿದ್ದು ವಾಹನ ಮಾಲೀಕರಿಗೆ ಇದು ತಲೆ ನೋವಾಗಿ ಪರಿಣಮಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೂಡ್ಸ್ ಆಟೋ ಚಾಲಕ, ನಿನ್ನೆ ರಾತ್ರಿ ಕೆಲಸ ಮುಗಿಸಿ 9ಗಂಟೆಗೆ ಇಲ್ಲಿ ವಾಹನ ನಿಲ್ಲಿಸಿ ಹೋಗಿದ್ದೆ. ನಾನು ಯಾವಾಗಲೂ ಇಲ್ಲೇ ನಿಲ್ಲಿಸೋದು, ಇಷ್ಟು ದಿನ ಏನೂ ಆಗಿರಲಿಲ್ಲ, ಆದರೆ ನಿನ್ನೆ ನಿಲ್ಲಿಸಿಹೋಗಿ ಇಂದು ಬೆಳಿಗ್ಗೆ 6ಗಂಟೆಗೆ ಬಂದು ನೋಡಿದಾಗ ಮುಂಭಾಗದ ಎರಡು ಚಕ್ರಗಳನ್ನು ಕಳ್ಳರು ಕದ್ದಿದ್ದಾರೆ. ಪಕ್ಕದಲ್ಲಿ ನಿಲ್ಲಿಸಲಾದ ಮತ್ತೊಂದು ವಾಹನದ ಸ್ಟೆಪ್ನಿ ಸಹ ಕದ್ದಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಲ್ಲಿದ್ದೇವೆ. ಈ ರೀತಿ ಕಳ್ಳತನ ಮಾಡಿದರೆ ನಮ್ಮ ಜೀವನ ನಡೆಸುವುದು ಹೇಗೆ..? ಪೊಲೀಸ್ ಠಾಣೆ ಇಲ್ಲೇ ಪಕ್ಕದಲ್ಲಿದ್ದರೂ ಕಳ್ಳತನ ನಡೆದಿದೆ. ನಾವು ಯಾರ ಬಳಿ ದೂರುವುದು ಎಂದು ಅಳಲು ತೋಡಿಕೊಂಡಿದ್ದಾರೆ. ಮೈಸೂರಿನಲ್ಲಿ ದಿನೇ ದಿನೇ ಕಳ್ಳರ ಹಾವಳಿ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - --